ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಸತತ ೮ ಬಾರಿ ಅಂಬಾರಿಹೊತ್ತು ಗಜಗಾಂಭೀರ್ಯದಲ್ಲಿ ನಡೆಯುತ್ತಿದ್ದ ಕ್ಯಾಪ್ಟನ್ ಅರ್ಜುನನಿಗೆ ಒಡೆಯರ್ ದಂಪತಿಗಳು ಅಂತಿಮ ನಮನ ಸಲ್ಲಿಸಿದ್ದಾರೆ.
ನಾಡಿನ ಅಚ್ಚುಮಚ್ಚಿನ ಕ್ಯಾಪ್ಟನ್, ಲೀಡರ್ ಅರ್ಜುನ, ಕಾಡಾನೆ ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿಗೆ ಸಾವನ್ನಪಿತ್ತು. ಸಕಲ ಸರ್ಕಾರಿ ಗೌರವದೊಂದಿಗೆ ಅರ್ಜುನನ ಅಂತ್ಯ ಸಂಸ್ಕಾರವನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಜಬ್ಬಳ್ಳಿ ಕಟ್ಟೆ ಗ್ರಾಮದಲ್ಲಿ ಮಾಡಲಾಗಿದೆ.
ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಪ್ರಶ್ನೆಗಳು ಹಾಗೂ ಅನುಮಾನಗಳು ವ್ಯಕ್ತವಾಗಿದ್ದವು. ಅವುಗಳಲ್ಲಿ ಅರ್ಜುನನ ಅಂತ್ಯಸಂಸ್ಕಾರಕ್ಕೆ ರಾಜವಂಶಸ್ತರು ಗೈರಾದದ್ದು ಒಂದು.
ಇದೀಗ ಎಲ್ಲಾ ಉಹಾಪೋಹಗಳಿಗೆ ಉತ್ತರದಂತೆ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಜಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ಅವರು ಅರ್ಜುನನ ಅಂತ್ಯಸಂಸ್ಕಾರ ಮಾಡಿದ್ದ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ದಸರಾ ಮಹೋತ್ಸವದಲ್ಲಿ ಸುಮಾರು ೮ ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯು ದೈವಾಧೀನವಾಗಿದ್ದು ಅತೀವ ದುಃಖವನ್ನುಂಟುಮಾಡಿದೆ. ಪೂರ್ವ ನಿಯೋಜಿತ ಕಾರ್ಯಕ್ರಮಗಳಿಂದಾಗಿ ಪ್ರಯಾಣದಲ್ಲಿದ್ದು ಅರ್ಜುನನ ಅಂತ್ಯಸಂಸ್ಕಾರಕ್ಕೆ ಭೇಟಿ ನೀಡಲಾಗದ ಕಾರಣ ಇಂದು ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅವನ ಸದ್ಗತಿಗಾಗಿ ಪ್ರಾರ್ಥಿಸಲಾಯಿತು ಎಂದು ತಿಳಿಸಿದ್ದಾರೆ.