ವಿಜಯಪುರ: ಸಿಎಂ ಸಿದ್ದರಾಮಯ್ಯ ಅವರೇ ನಕ್ಸಲರಿಗೆ ಶರಣಾಗುವ ಮೂಲಕ ವಿಶೇಷ ಪ್ಯಾಕೇಜ್ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲರು ಶಸ್ತ್ರಾಸ್ತ್ರಗಳನ್ನು ಮುಂದೆ ಇಟ್ಟು ಶರಣಾಗಬೇಕಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರೇ ನಕ್ಸಲರಿಗೆ ಶರಣಾಗುವ ಮೂಲಕ ಇಡೀ ಸರ್ಕಾರವೇ ಇವರ ಮುಂದೆ ಶರಣಾಗುವ ರೀತಿ ನಡೆದುಕೊಂಡಿದ್ದಾರೆ.
ನಕ್ಸಲರಿಂದ ಹತ್ಯೆಯಾದ ಪೊಲೀಸರು, ನಾಗರೀಕರ ಕುಟುಂಬಕ್ಕೆ ಸರ್ಕಾರ ಏನು ಕೊಟ್ಟಿದೆ? ನಕ್ಸಲರು ಮುಖ್ಯವಾಹಿನಿಗೆ ಬರಬೇಕು ಅಂದರೆ ಕಾನೂನು ಮುಖಾಂತರ ಆಗಬೇಕು ಎಂದು ತಿಳಿಸಿದರು.
ಇನ್ನು ಬಿಜೆಪಿಯ ಮಾಜಿ ಶಾಸಕರ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಪಕ್ಷದ ವಿರುದ್ಧ ಹೋಗಿಲ್ಲ. ರಾಜ್ಯಾಧ್ಯಕ್ಷ ಹುದ್ದೆಯಲ್ಲಿರುವ ಕಾರಣದಿಂದ ಹೋಗಿದ್ದೇವೆ. ಅವರ ಸಭೆಗೆ ಯಾವುದೇ ವಿರೋಧವಿಲ್ಲ. ಅವರು ಮಾಜಿ ಶಾಸಕರಾಗಲು ಕಾರಣ ಯಾರು ಎಂದು ಆತ್ಮಾವಲೋಕನ ಅಲ್ಲಿ ಆಗಬೇಕಿತ್ತು ಎಂದರು.