Mysore
25
overcast clouds
Light
Dark

ಅಂದು ಕಣ್ಣಲ್ಲಿ ನೀರು, ಮನೆ ಮೇಲೆ ಕಲ್ಲು; ದ್ರಾವಿಡ್‌ ಎಂಬ ದ್ರೋಣಾಚಾರ್ಯನಿಗೀಗ ಪ್ರತೀಕಾರದ ಸಮಯ

ಅದು 2007ರ ವಿಶ್ವಕಪ್‌ನ ಟೂರ್ನಿ. ಟೀಮ್‌ ಇಂಡಿಯಾ ಕರ್ನಾಟಕದ ಆಟಗಾರ ರಾಹುಲ್‌ ದ್ರಾವಿಡ್‌ ನಾಯಕತ್ವದಲ್ಲಿ ಕಣಕ್ಕಿಳಿದಿತ್ತು. ಆದರೆ ಭಾರತ ತಂಡ ನಿರೀಕ್ಷಿಸಿದ ಪ್ರದರ್ಶನ ನೀಡಲಾಗದೇ ಟೂರ್ನಿಯಿಂದ ಗ್ರೂಪ್‌ ಹಂತದಲ್ಲಿಯೇ ಹೊರಬಿದ್ದಿತ್ತು. ಗ್ರೂಪ್‌ ಹಂತದಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿ ನೆಲಕಚ್ಚಿದ್ದ ತನ್ನ ತಂಡವನ್ನು ಕಂಡು ನಾಯಕ ದ್ರಾವಿಡ್‌ ಮೈದಾನದಲ್ಲಿಯೇ ಕಣ್ಣೀರು ಹಾಕಿದ್ದರು.

ಅಷ್ಟೇ ಅಲ್ಲದೇ ಬೆಂಗಳೂರಿನ ರಾಹುಲ್‌ ದ್ರಾವಿಡ್‌ ನಿವಾಸದ ಮೇಲೆ ಕಲ್ಲು ಎಸೆಯುವ ಮೂಲಕ ಕಿಡಿಗೇಡಿಗಳು ವಿಶ್ವಕಪ್‌ ಸೋಲಿನ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಹೀಗೆ ಅಂದು ನಾಯಕನಾಗಿ ತೀವ್ರ ಮುಖಭಂಗ ಅನುಭವಿಸಿದ್ದ ರಾಹುಲ್‌ ದ್ರಾವಿಡ್‌ ಈಗ ಕೋಚ್‌ ಆಗಿ ವಿಶ್ವಕಪ್‌ ಎತ್ತಿ ಹಿಡಿಯುವ ಸನಿಹಕ್ಕೆ ಬಂದು ತಲುಪಿದ್ದಾರೆ.

ಹೌದು, ರವಿಶಾಸ್ತ್ರಿ ಬಳಿಕ ಭಾರತ ತಂಡದ ಕೋಚ್‌ ಆಗಿ ಆಯ್ಕೆಯಾದ ದ್ರಾವಿಡ್‌ ಸದ್ಯ ತಂಡವನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಾವು ಕೋಚ್‌ ಆಗಿ ಆಯ್ಕೆಯಾದಾಗ ಇದು ತಪ್ಪಾದ ಆಯ್ಕೆ, ದ್ರಾವಿಡ್‌ ಕೋಚ್‌ ಆಗಲು ಅಸಮರ್ಥರು ಎಂದು ಕಾಮೆಂಟ್‌ ಮಾಡಿದ್ದವರ ಬಾಯನ್ನು ಮುಚ್ಚಿಸಿದ್ದಾರೆ.

ಸ್ವತಃ ನಾಯಕ ರೋಹಿತ್‌ ಶರ್ಮಾ ಅವರೇ ರಾಹುಲ್‌ ದ್ರಾವಿಡ್‌ ಗಾಯದಿಂದ ಚೇತರಿಸಿಕೊಂಡು ತಂಡ ಸೇರಿದ ಆಟಗಾರರಿಗೆ ಸ್ವತಂತ್ರ ಕೊಟ್ಟು ಹೆಚ್ಚೇನೂ ಬದಲಾವಣೆ ಮಾಡದೇ ತಂಡವನ್ನು ಸಿದ್ಧಪಡಿಸಿದ್ದೇ ಯಶಸ್ಸಿಗೆ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಹೌದು, ರಾಹುಲ್‌ ದ್ರಾವಿಡ್‌ ಗಾಯದಿಂದ ಚೇತರಿಸಿಕೊಂಡು ತಂಡ ಸೇರಿದ ಶ್ರೇಯಸ್‌ ಐಯ್ಯರ್‌ ಹಾಗೂ ಕೆಎಲ್‌ ರಾಹುಲ್‌ಗೆ ತಂಡದಲ್ಲಿ ಸ್ಥಾನ ನೀಡಿದ್ದು ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಈ ಮಟ್ಟ ತಲುಪಲು ಪ್ರಮುಖ ಕಾರಣವಾಗಿದೆ.

ಈ ಹಿಂದಿನ ವಿಶ್ವಕಪ್‌ಗಳ ಹಾಗೆ ಹೆಚ್ಚು ಪಂದ್ಯ ಆಡಿ ಅನುಭವಿಗಳು ಎನಿಸಿಕೊಂಡವರಿಗೆ ಹೆಚ್ಚಾಗಿ ಮಣೆ ಹಾಕದ ರಾಹುಲ್‌ ದ್ರಾವಿಡ್‌ ಸಮರ್ಥವಾಗಿ ಆಡಬಲ್ಲ ಆಟಗಾರರನ್ನು ಮೈದಾನಕ್ಕೆ ಇಳಿಸಿ ಜಾಣ್ಮೆ ಮೆರೆದಿದ್ದಾರೆ. ಇದು ಸಾಧ್ಯವಾಗಿದ್ದು ಏಕಕಾಲಕ್ಕೆ ಎರಡೆರಡು ಅಂತರರಾಷ್ಟ್ರೀಯ ತಂಡಗಳನ್ನು ರಾಹುಲ್‌ ದ್ರಾವಿಡ್‌ ರಚಿಸಿ ಪಂದ್ಯಗಳನ್ನು ಆಡಿಸಿದ್ದು. ಹೀಗೆ ತಾನು ಕೋಚ್‌ ಆದಾಗಿನಿಂದ ಇಲ್ಲಿಯವರೆಗೂ ಬಹುತೇಕ ಆಟಗಾರರಿಗೆ ಆಡುವ ಅವಕಾಶ ನೀಡಿದ್ದರಿಂದಲೇ ಇಂದು ವಿಶ್ವಕಪ್‌ನಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವಂತ ಸಮರ್ಥ ಟೀಮ್‌ ಇಂಡಿಯಾ ರೆಡಿಯಾಗಿ ನಿಂತಿದೆ ಎಂದೇ ಹೇಳಬಹುದಾಗಿದೆ.

ಒಟ್ಟಿನಲ್ಲಿ 2007ರ ವಿಶ್ವಕಪ್‌ನಲ್ಲಿ ಆದ ಅವಮಾನಕ್ಕೆ 16 ವರ್ಷಗಳ ಬಳಿಕ ರಾಹುಲ್‌ ದ್ರಾವಿಡ್‌ ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧರಿದ್ದಾಗಿದ್ದಾರೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಬರುವ ಫಲಿತಾಂಶ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿ ಮುಂದುವರೆಯುತ್ತಾರಾ ಅಥವಾ ಇಲ್ಲವಾ ಎಂಬುದನ್ನೂ ಸಹ ನಿರ್ಧರಿಸಲಿದೆ.

ರಾಹುಲ್‌ ದ್ರಾವಿಡ್‌ ವಿಶ್ವಕಪ್‌ನ ಏಳುಬೀಳುಗಳು
* 1999ರ ವಿಶ್ವಕಪ್‌ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಬಾರಿಸಿದ ಆಟಗಾರ
* 2003ರ ವಿಶ್ವಕಪ್‌ ಟೂರ್ನಿಯಲ್ಲಿ ತಂಡದ ಉಪನಾಯಕನಾಗಿ ಫೈನಲ್‌ ಪಂದ್ಯದಲ್ಲಿ ಸೋತಿದ್ದ ರಾಹುಲ್‌ ದ್ರಾವಿಡ್‌
* 2007ರ ವಿಶ್ವಕಪ್‌ನಲ್ಲಿ ನಾಯಕನಾಗಿ ಲೀಗ್‌ ಹಂತದಲ್ಲಿಯೇ ಹೊರಬೀಳುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದ ದ್ರಾವಿಡ್‌
* ಈ ಬಾರಿಯ ವಿಶ್ವಕಪ್‌ನಲ್ಲಿ ಕೋಚ್‌ ಆಗಿ ತಂಡವನ್ನು ಫೈನಲ್‌ ತಲುಪಿಸಿದ ಸಾಧನೆ. 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ