Mysore
21
overcast clouds
Light
Dark

ಮಹಾರಾಜ ಟ್ರೋಫಿ 2022 : ಮೈಸೂರು ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಗುಲ್ಬರ್ಗ

ಬೆಂಗಳೂರು.: ಮೈಸೂರು ವಾರಿಯರ್ಸ್‌ ವಿರುದ್ಧ 6 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಪ್ರತಿಷ್ಠಿತ ಮಹಾರಾಜ ಟ್ರೋಫಿ ಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಎದುರಿಸಲಿದೆ.
158 ರನ್‌ ಜಯದ ಗುರಿಹೊತ್ತ ಗುಲ್ಬರ್ಗ ಮಿಸ್ಟಿಕ್ಸ್‌, ದೇವದತ್ತ ಪಡಿಕ್ಕಲ್‌ ಅವರ ಅಜೇಯ 96*ರನ್‌ ನೆರವಿನಿಂದ ಇನ್ನೂ 2 ಎಸೆತ ಬಾಕಿ ಇರುವಾಗಲೇ ಗುರಿ ತಲುಪಿತು. ಮನೋಜ್‌ ಬಾಂಡಗೆ (35*) ಹಾಗೂ ಪಡಿಕ್ಕಲ್‌ 80 ರನ್‌ ಜೊತೆಯಾಟವಾಡಿ ಜಯದ ಹಾದಿಯನ್ನು ಸುಗಮಗೊಳಿಸಿದರು. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್‌ ಹಾಗೂ ಬೆಂಗಳೂರು ಬ್ಲಾಸ್ಟರ್ಸ್‌ ತಂಡಗಳು ಪ್ರತಿಷ್ಠಿತ ಮಹಾರಾಜ ಟ್ರೋಫಿಗಾಗಿ ಅಂತಿಮ ಹೋರಾಟ ನಡೆಸಲಿವೆ.
ದೇವದತ್ತ ಪಡಿಕ್ಕಲ್‌ ಅವರು 64 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಸಿ ಜಯದ ರೂವಾರಿ ಎನಿಸಿದರು.
ಮೈಸೂರು ವಾರಿಯರ್ಸ್‌ ಸಾಧಾರಣ ಮೊತ್ತ:
ಮಹಾರಾಜ ಟ್ರೋಫಿಯ ಎರಡನೇ ಕ್ವಾಲಿಫಯರ್‌ನಲ್ಲಿ ಫೈನಲ್‌ ತಲಪುವ ತವದಕಲ್ಲಿರುವ ಮೈಸೂರು ವಾರಿಯರ್ಸ್‌ ತಂಡ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 157ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದೆ. ಉತ್ತಮ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ಮೈಸೂರು ವಾರಿಯರ್ಸ್‌ ತಂಡವನ್ನು ಗುಲ್ಬರ್ಗ ಇಷ್ಟು ಮೊತ್ತಕ್ಕೆ ನಿಯಂತ್ರಿಸಿದೆ ಎಂದರೆ ಗುಲ್ಬರ್ಗದ ಗುರಿ ಏನೆಂಬುದು ಸ್ಪಷ್ಟವಾಗುತ್ತದೆ.
ಟಾಸ್‌ ಗೆದ್ದ ಮಿಸ್ಟಿಕ್ಸ್‌ ನಾಯಕ ಮನೀಶ್‌ ಪಾಂಡೆ ಫೀಲ್ಡಿಂಗ್‌ ಆಯ್ದುಕೊಂಂಡರು. ವಿಶೇಷವೆಂದರೆ ಇದುವರೆಗೂ ಯಾರೂ ಬ್ಯಾಟಿಂಗ್‌ ಆಯ್ದುಕೊಂಡಿಲ್ಲ. ಮೈಸೂರು ಬೃಹತ್‌ ಮೊತ್ತ ದಾಖಲಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ನಾಯಕ ಕರುಣ್ ನಾಯರ್‌ (42) ಅವರ ಗುರಿ ಸ್ಪಷ್ಟವಾಗಿತ್ತು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳ ಯೋಚನೆಯೇ ಬೇರೆಯಾಗಿತ್ತು. ಪ್ರತಿಯೊಂದು ಪಂದ್ಯದಲ್ಲಿ ಮಿಂಚಿದ್ದ ಆರಂಭಿಕ ಆಟಗಾರ ನಿಹಾಲ್‌ ಉಳ್ಳಾಲ್‌ (14) ಬೇಗನೇ ವಿಕೆಟ್‌ ಕಳೆದುಕೊಂಡಾಗ ಮೈಸೂರಿನ ಸ್ಕೋರ್‌ ಯಾವ ಹಂತ ತಲುಪಬಹುದೆಂಬುದು ಸ್ಪಷ್ಟವಾಗಿತ್ತು. ಕರುಣ್‌ ನಾಯರ್‌ 32 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು.
ಮೈಸೂರು ತಂಡದ ಬ್ಯಾಟಿಂಗ್‌ ಬೆನ್ನೆಲುಬು ಪವನ್‌ ದೇಶಪಾಂಡೆ 42 ಎಸೆತಗಳನ್ನು ಎಸುರಿಸಿ 38 ರನ್‌ ಗಳಿಸಿದಾಗ ಗುಲ್ಬರ್ಗದ ಬೌಲಿಂಗ್‌ ಎಷ್ಟು ನಿಖರತೆಯಿಂದ ಕೂಡಿತ್ತು ಎಂಬುದು ಸ್ಪಷ್ಟ. ಶ್ರೇಯಸ್‌ ಗೋಪಾಲ್‌ (10), ಶಿವರಾಜ್‌ (16) ಹೆಚ್ಚು ಕಾಲ ಕ್ರೀಸಿನಲ್ಲಿ ಉಳಿಯಲಿಲ್ಲ. ನಾಗ ಭರತ್‌ ಕೇವಲ 12 ಎಸೆತಗಳನ್ನು ಎದುರಿಸಿ 3 ಸಿಕ್ಸರ್‌ ಹಾಗೂ 1 ಬೌಂಡರಿ ನೆರವಿನಿಂದ ತಂಡದ ಸಾಧಾರಣ ಮೊತ್ತಕ್ಕೆ ತನ್ನದೇ ಆದ ಕೊಡುಗೆ ನೀಡಿದರು.
ಗುಲ್ಬರ್ಗ ಮಿಸ್ಟಿಕ್ಸ್‌ ಪರ ವಿದ್ವತ್‌ ಕಾವೇರಪ್ಪ ಹಾಗೂ ಕುಶಲ್‌ ವಾದ್ವಾನಿ ತಲಾ 2 ವಿಕೆಟ್‌ ಗಳಿಸಿ ಮೈಸೂರಿನ ರನ್‌ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಬೃಹತ್‌ ಮೊತ್ತದ ಗುರಿ ಹೊತ್ತಿದ್ದ ಮೈಸೂರು ವಾರಿಯರ್ಸ್‌ ಅಂತಿಮವಾಗಿ 5 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿತು.

ಸಂಕ್ಷಿಪ್ತ ಸ್ಕೋರ್‌:
ಮೈಸೂರು ವಾರಿಯರ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 157 (ಕರುಣ್‌ ನಾಯರ್‌ 42, ಪವನ್‌ ದೇಶಪಾಂಡೆ 38, ನಾಗ ಭರತ್‌ 27* ವಿದ್ವತ್‌ ಕಾವೇರಪ್ಪ 52ಕ್ಕೆ 2, ಕುಶಲ್‌ ವಾದ್ವಾನಿ 17ಕ್ಕೆ 2)
ಗುಲ್ಬರ್ಗ ಮಿಸ್ಟಿಕ್ಸ್‌: 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 158 (ದೇವದತ್ತ ಪಡಿಕ್ಕಲ್‌ 96*. ಮನೋಜ್‌ 35* ಪವನ್‌ ದೇಶಪಾಂಡೆ 16ಕ್ಕೆ 2, ಮೊನೀಶ್‌ ರೆಡ್ಡಿ 24ಕ್ಕೆ 1)

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ