Mysore
20
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಟೀಮ್ ಇಂಡಿಯಾ ವೈಫಲ್ಯಕ್ಕೆ ಪ್ರಮುಖ ಕಾರಣ ತಿಳಿಸಿದ ಕೋಚ್‌ ರಾಹುಲ್ ದ್ರಾವಿಡ್‌!

ಬೆಂಗಳೂರು: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಸೋತಿರುವುದು ಭಾರಿ ನಿರಾಶೆ ತಂದೊಡ್ಡಿದೆ ಆದರೂ, ಯುವ ಆಟಗಾರರನ್ನು ಒಳಗೊಂಡ ಟೀಮ್ ಇಂಡಿಯಾ ಇದರಿಂದ ಸಾಕಷ್ಟು ಪಾಠ ಕಲಿಯಲಿದೆ ಎಂದು ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅಭಿಪ್ರಾಯಪಟ್ಟಿದ್ದಾರೆ.

ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತರೂ, ಬಳಿಕ ಬ್ಯಾಕ್‌ ಟು ಬ್ಯಾಕ್‌ ಜಯದೊಂದಿಗೆ ಕಮ್‌ಬ್ಯಾಕ್‌ ಮಾಡಿತ್ತು. ಆದರೆ, ಐದನೇ ಹಾಗೂ ಅಂತಿಮ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲಿನೊಂದಿಗೆ ಸರಣಿ ಕೈಚೆಲ್ಲಿತು.

ಅನುಭವಿಗಳಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ ಮತ್ತು ಕೆ.ಎಲ್ ರಾಹುಲ್‌ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮುನ್ನಡೆಸಿದ್ದರು. ಆದರೆ, 6 ವರ್ಷಗಳ ಬಳಿಕ ಮೊದಲ ಬಾರಿ ವೆಸ್ಟ್‌ ಇಂಡೀಸ್‌ ಎದುರು ದ್ವಿಪಕ್ಷೀಯ ಟಿ20 ಕ್ರಿಕೆಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲುಂಡಿತು.

“ಸರಣಿಯ ಅಂತಿಮ ಪಂದ್ಯ ಗೆದ್ದು ಉತ್ತಮ ರೀತಿಯಲ್ಲಿ ಅಂತ್ಯಗೊಳಿಸಲು ಸಾಧ್ಯವಾಗಲಿಲ್ಲ. ಈ ಹಾದಿಯಲ್ಲಿ ನಾವು ಕೆಲ ತಪ್ಪುಗಳನ್ನು ಮಾಡಿದ್ದೇವೆ. ಐದೂ ಪಂದ್ಯಗಳನ್ನು ಗಮನಿಸಿದರೆ ನಮ್ಮ ತಪ್ಪುಗಳು ತಿಳಿಯುತ್ತವೆ. ಮೊದಲ ಎರಡು ಪಂದ್ದಯ ಮತ್ತು ಐದನೇ ಪಂದ್ಯದಲ್ಲಿ ನಮ್ಮ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್‌ ಮಾಡಲಿಲ್ಲ. ಈ ರೀತಿ ಆಗುವುದು ಸಹಜ. ಯುವ ತಂಡವಿದು, ಇನ್ನು ಅಭಿವೃದ್ಧಿಯಾಗುತ್ತಿದೆ. ಈ ಸೋಲು ತಂಡಕ್ಕೆ ಸಾಕಷ್ಟು ಪಾಠ ಕಲಿಸಲಿದೆ,” ಎಂದು ಕೋಚ್‌ ರಾಹುಲ್ ದ್ರಾವಿಡ್‌ ಹೇಳಿದ್ದಾರೆ.

“ಎಲ್ಲಾ ಸಮಯದಲ್ಲೂ ಗೆಲ್ಲಲು ಸಾಧ್ಯವಿಲ್ಲ, ತಂಡವೊಂದು ಏಳು-ಬೀಳು ಕಾಣುವುದು ಸಹಜ. ಖಂಡಿತಾ ಸೋಲು ಬೇಸರ ತಂದಿದೆ. ಈ ಸರಣಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಕಲ ಪ್ರಯತ್ನ ಮಾಡಿದ್ದೇವೆ. ಆದರೂ, 0-2 ಅಂತರದ ಹಿನ್ನಡೆಯಿಂದ ಕಮ್‌ಬ್ಯಾಕ್‌ ಮಾಡಿದ್ದು ವಿಶೇಷ ಸಂಗತಿಯಾಗಿದೆ,” ಎಂದಿದ್ದಾರೆ.

“ಈ ಸರಣಿಯಿಂದ ಕಲಿಯಲು ಬಹಳಷ್ಟು ಸಿಕ್ಕಿದೆ. ಇಲ್ಲಿ ವೆಸ್ಟ್‌ ಇಂಡೀಸ್‌ ತಂಡ ಆಡಿರುವ ರೀತಿಯನ್ನು ಶ್ಲಾಘಿಸಬೇಕು. ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ ಉತ್ತಮ ತಂಡವಾಗಿದೆ. ತಾಯ್ನಾಡಿನಲ್ಲಿ ಅಲ್ಲಿನ ಸ್ಥಿತಿಗತಿಗಳಿಗೆ ತಕ್ಕಂತೆ ಅತ್ಯುತ್ತಮ ಕ್ರಿಕೆಟ್‌ ಆಡಿದೆ. ಅವರಿಗೆ ಆಲ್‌ ದಿ ಬೆಸ್ಟ್‌,” ಎಂದು ಹಾರೈಸಿದ್ದಾರೆ.

ಭಾರತ ತಂಡ ಇದೀಗ ಐರ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 18ರಂದು ಶುರುವಾಗಲಿರುವ 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಭಾರತ ತಂಡವನ್ನು ಅನುಭವಿ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಮುನ್ನಡೆಸಲಿದ್ದಾರೆ.

ಏಷ್ಯಾ ಕಪ್‌ಗೂ ಮುನ್ನ ಭಾರತ ತಂಡ ಆಡಲಿರುವ ಕಡೆಯ ಸರಣಿ ಇದಾಗಿದೆ. ಈ ಸರಣಿಯಲ್ಲಿ ಬುಮ್ರಾ ಅವರ ಮ್ಯಾಚ್‌ ಫಿಟ್ನೆಸ್‌ ಪರೀಕ್ಷೆ ನಡೆಯಲಿದೆ. ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ಟೂರ್ನಿ ಆಗಸ್ಟ್‌ 30ರಂದು ಶುರುವಾಗಲಿದೆ. ಬುಮ್ರಾ ಫಿಟ್ನೆಸ್‌ ಸಾಬೀತಾದರೆ ಮಾತ್ರ ಏಷ್ಯಾ ಕಪ್ 2023 ಟೂರ್ನಿಗೆ ಆಯ್ಕೆಯಾಗಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!