Mysore
20
overcast clouds
Light
Dark

ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ

ಪಾಕಿಸ್ತಾನ್‌ :  ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಸೋಮವಾರ (ಸೆಪ್ಟೆಂಬರ್ 4) ಪಾಕಿಸ್ತಾನಕ್ಕೆ ತೆರಳಿದ್ದಾರೆ. ಏಷ್ಯಾಕಪ್​ ಟೂರ್ನಿ ನಿಮಿತ್ತ ಪಾಕ್ ಕ್ರಿಕೆಟ್ ಮಂಡಳಿ ನೀಡಿದ ವಿಶೇಷ ಆಹ್ವಾನದ ಮೇರೆಗೆ ಬಿಸಿಸಿಐ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಾಕ್​ಗೆ ಭೇಟಿ ನೀಡಿದ್ದಾರೆ.

ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರೋಜರ್ ಬಿನ್ನಿ ಹಾಗೂ ರಾಜೀವ್ ಶುಕ್ಲಾ ಅವರು ಆ ಬಳಿಕ ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣಿಸಿದರು. ಅತ್ತ ಬಿಸಿಸಿಐ ಅಧ್ಯಕ್ಷ-ಉಪಾಧ್ಯಕ್ಷರನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆಡಳಿತ ಸಮಿತಿಯ ಅಧ್ಯಕ್ಷ ಝಾಕಾ ಅಶ್ರಫ್ ಸ್ವಾಗತಿಸಿದರು.

ಈ ಪ್ರಯಾಣಕ್ಕೂ ಮುನ್ನ ಮಾತನಾಡಿದ ರಾಜೀವ್ ಶುಕ್ಲಾ, ಎರಡು ದಿನಗಳ ಪಾಕ್​ ಭೇಟಿಯು ಕೇವಲ ಕ್ರಿಕೆಟ್​ ಉದ್ದೇಶಕ್ಕಾಗಿ ಮಾತ್ರ. ಇಲ್ಲಿ ಯಾವುದೇ ರಾಜಕೀಯ ಉದ್ದೇಶಗಳಿಲ್ಲ ಎಂದು ತಿಳಿಸಿದ್ದಾರೆ.

2006 ರ ನಂತರ ನಾನು ಮೊದಲ ಬಾರಿಗೆ ಪಾಕಿಸ್ತಾನಕ್ಕೆ ತೆರಳುತ್ತಿದ್ದೇನೆ ಎಂದಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ನಾವು ಪಂದ್ಯಗಳನ್ನು ನೋಡಲು ಕೊಲಂಬೊಗೆ ಹೋಗಿದ್ದೆವು. ಅದೇ ರೀತಿಯಲ್ಲಿ ಇದೀಗ ಪಾಕ್​ಗೂ ಭೇಟಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

15 ವರ್ಷಗಳ ಬಳಿಕ ಭೇಟಿ : 2008 ರಲ್ಲಿ ಭಾರತದ ಮೇಲೆ ನಡೆದ ಪಾಕ್ ಉಗ್ರರ ದಾಳಿ ಬಳಿಕ ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಇದಾದ ಬಳಿಕ ಟೀಮ್ ಇಂಡಿಯಾ ಪಾಕಿಸ್ತಾನದಲ್ಲಿ ಯಾವುದೇ ಸರಣಿ ಆಡಿಲ್ಲ. ಅಷ್ಟೇ ಅಲ್ಲದೆ 2008 ರ ಬಳಿಕ ಬಿಸಿಸಿಐನ ಯಾವುದೇ ಅಧಿಕಾರಿ ಕೂಡ ಪಾಕ್​ಗೆ ಭೇಟಿ ನೀಡಿರಲಿಲ್ಲ. ಇದೀಗ 15 ವರ್ಷಗಳ ಬಳಿಕ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಧ್ಯಾಕ್ಷ ರಾಜೀವ್ ಶುಕ್ಲಾ ಪಾಕ್​ಗೆ ಭೇಟಿ ನೀಡಿರುವುದು ವಿಶೇಷ.

ಅಫ್ಘಾನಿಸ್ತಾನ್-ಶ್ರೀಲಂಕಾ ಪಂದ್ಯಕ್ಕೆ ವಿಶೇಷ ಅತಿಥಿ : ಸೆಪ್ಟೆಂಬರ್ 5 ರಂದು ಲಾಹೋರ್​ನಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಧ್ಯಾಕ್ಷ ರಾಜೀವ್ ಶುಕ್ಲಾ ಮುಖ್ಯ ಅತಿಥಿಗಳಾಗಿ ಗಢಾಫಿ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

15 ವರ್ಷಗಳ ಬಳಿಕ ಏಷ್ಯಾಕಪ್ : ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ 15 ವರ್ಷಗಳ ಬಳಿಕ ಏಷ್ಯಾಕಪ್​ ಅನ್ನು ಆಯೋಜಿಸುತ್ತಿದೆ. ಇದೇ ವೇಳೆ ಎಲ್ಲಾ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳಿಗೆ ವಿಶೇಷ ಆಹ್ವಾನವನ್ನು ನೀಡಲಾಗಿದೆ. ಈ ಹಿಂದೆ ಆಗಸ್ಟ್ 30 ರಂದು ಮುಲ್ತಾನ್​ನಲ್ಲಿ ನಡೆದ ಉದ್ಘಾಟನಾ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.

ಆದರೆ ಕಾರಣರಾಂತರಗಳಿಂದ ರೋಜರ್ ಬಿನ್ನಿ ಹಾಗೂ ರಾಜೀವ್ ಶುಕ್ಲಾ ಪಾಕ್​ಗೆ ಪ್ರಯಾಣಿಸಿರಲಿಲ್ಲ. ಇದೀಗ ವಾಘಾ ಗಡಿಯ ಮೂಲಕ ಬಿಸಿಸಿಐ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಾಕ್​ಗೆ ಭೇಟಿ ನೀಡಿದ್ದು, ಈ ಮೂಲಕ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನೀಡಿದ ಆಹ್ವಾನವನ್ನು ಗೌರವಿಸಿದ್ದಾರೆ.

ಹೊಸ ನಿರೀಕ್ಷೆ ಹುಟ್ಟುಹಾಕಿದ ಬಿಸಿಸಿಐ : ಈ ಬಾರಿಯ ಏಷ್ಯಾಕಪ್​ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಮುಖ್ಯ ಕಾರಣ ಬಿಸಿಸಿಐ. ಅಂದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಏಷ್ಯಾಕಪ್​ನ ಎಲ್ಲಾ ಪಂದ್ಯಗಳು ಪಾಕ್​ನಲ್ಲಿ  ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ತಿಳಿಸಿತ್ತು. ಹೀಗಾಗಿ ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲಿ ಏಷ್ಯಾಕಪ್​ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

ಇದಾಗ್ಯೂ ಬಿಸಿಸಿಐ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು ವಿಶೇಷ. ಹೀಗಾಗಿ ಉಭಯ ತಂಡಗಳ ನಡುವಣ ದ್ವಿಪಕ್ಷೀಯ ಸರಣಿಯ ಚರ್ಚೆಗಳು ಮತ್ತೆ ಮುನ್ನಲೆಗೆ ಬರಲಿದೆ.

ಭಾರತ-ಪಾಕ್ ಕೊನೆಯ ಸರಣಿ : 2008 ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಭಾರತ ತಂಡವು ಪಾಕಿಸ್ತಾನದಲ್ಲಿ ಸರಣಿ ಆಡಿಲ್ಲ. ಇದಾಗ್ಯೂ ಪಾಕಿಸ್ತಾನ್ ತಂಡವು 2012-13 ರವರೆಗೆ ಭಾರತದಲ್ಲಿ ಸರಣಿ ಆಡಿದೆ. ಆ ಬಳಿಕ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಇತ್ತ ಏಷ್ಯಾಕಪ್ ಹಾಗೂ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಭಾರತ-ಪಾಕ್ ಮುಖಾಮುಖಿಯಾಗುತ್ತಿದೆ.

ಇದೀಗ ಬಿಸಿಸಿಐ ಅಧ್ಯಕ್ಷರು ಹಾಗೂ ಪಿಸಿಬಿ ಅಧ್ಯಕ್ಷರ ಭೇಟಿಯು ದ್ವಿಪಕ್ಷೀಯ ಸರಣಿ ಆಯೋಜನೆಯ ನಿರೀಕ್ಷೆಯನ್ನು ಹೆಚ್ಚಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ