ದುಬೈ : ಮುಂಬರುವ ಏಷ್ಯಾಕಪ್ ಕೂಟದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೆಣಸಲಿದ್ದು, ಸೆ.14 ರಂದು ಪಂದ್ಯ ನಿಗದಿಯಾಗಿದೆ. ಆದರೆ ಪಂದ್ಯ ರದ್ದಾಗುವ ಸಾಧ್ಯತೆ ದಟ್ಟವಾಗಿದೆ.
ಪದೇ ಪದೇ ಕಾಲುಕೆರೆದು ಜಗಳಕ್ಕೆ ಬರುವ, ಸದಾ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಸಹವಾಸವೇ ಬೇಡ ಎಂಬ ಅನೇಕರ ಪ್ರತಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ನಡೆದಿದ್ದ ವಿಶ್ವ ಲೆಜೆಂಡ್ಸ್ ಚಾಂಪಿಯನ್ಷಿಪ್ (ಡಬ್ಲ್ಯೂಸಿಎಲ್) ಟೂರ್ನಿಯಲ್ಲಿ ಭಾರತ ತಂಡ ಪಾಕ್ನೊಂದಿಗೆ ಪಂದ್ಯ ಆಡಲು ನಿರಾಕರಿಸಿತ್ತು. ಲೀಗ್ ಹಂತ ಮಾತ್ರವಲ್ಲದೆ ಸೆಮಿ ಪಂದ್ಯವನ್ನು ಕೂಡ ಭಾರತ ಆಡಿರಲಿಲ್ಲ. ಹೀಗಾಗಿ ಏಷ್ಯಾ ಕಪ್ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಆಡಬಾರದು ಎಂಬುದು ಭಾರತೀಯ ಅಭಿಮಾನಿಗಳ ಒತ್ತಾಯವಾಗಿದೆ.
ಇನ್ನು ಕೆಲವರು ನಾವೇಕೆ ಪಾಕಿಸ್ತಾನಕ್ಕೆ ಪುಕ್ಕಟೆ ಎರಡಂಕ ಕೊಡಬೇಕು. ಅವರನ್ನು ಇನ್ನೊಮ್ಮೆ ಹೆಡೆಮುರಿ ಕಟ್ಟಿ ಸೋಲಿಸಬೇಕು ಎಂದಿದ್ದಾರೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಸುಭಾನ್ ಅಹದ್ ಪ್ರಕಾರ, ಏಷ್ಯಾಕಪ್ನಲ್ಲಿ ಪಂದ್ಯ ರದ್ದಾಗುವ ಸಾಧ್ಯತೆ ಕಡಿಮೆ. ನಾವು ಯಾವುದೇ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಏಷ್ಯಾ ಕಪ್ನಲ್ಲಿ ಆಡಲು ಸರ್ಕಾರದ ಅನುಮತಿಯನ್ನು ಮುಂಚಿತವಾಗಿ ತೆಗೆದುಕೊಳ್ಳಲಾಗುತ್ತದೆ. ವೇಳಾಪಟ್ಟಿಯನ್ನು ಘೋಷಿಸುವ ನಿರ್ಧಾರಕ್ಕೆ ಬರುವ ಮೊದಲೇ ಅದನ್ನು ಮಾಡಲಾಗಿದೆ. ಆದ್ದರಿಂದ ಡಬ್ಲ್ಯೂಸಿಐನಲ್ಲಿ ಇದ್ದಂತಹ ಪರಿಸ್ಥಿತಿ ನಮಗೆ ಬರದಿರಲು ಆಶಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.





