ಹಾಸನ : ಎಲ್ಲಾ ಜನಗಳಿಂದ ಗೆದ್ದು ಈಗ ಸಮಾಜಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಜಾತಿ ಗಣತಿ ಮಾಡುವ ಮೂಲಕ ಜನಗಳ ಕೈಗಳಲ್ಲಿ ತಮ್ಮ ಬಗ್ಗೆ ಕೆಟ್ಟ ಭಾವನೆ ಬರುವಂತೆ ಮಾಡಿಕೊಳ್ಳುತ್ತಿದ್ದಾರೆ. ಜಾತಿಗಣತಿ ಯಾಕೆ ಬೇಕು ? ಈ ರಾಜ್ಯ ಉದ್ದಾರ ಆಗಬೇಕಾದರೆ ಜಾತಿಗಣತಿ ಬೇಕಿಲ್ಲ. ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಜಾತಿ ಜಾತಿಗಳನ್ನು ಎತ್ತಿಕಟ್ಟಿ ಹೊಡೆದಾಡಿಸುವ ಕೆಲಸ ಮಾಡಬಾರದು ಎಂದಿದ್ದಾರೆ.
ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳುತ್ತಿದ್ದೀರ. ಕೊಡಬೇಡಿ ಎನುವುದಿಲ್ಲ ಆದರೆ ಹಿಂದುಗಳಿಂದ ಹಿಂದುಗಳಿಗೆ ಏನು ಕೊಡ್ತೀರಿ ? ಏನು ಘೋಷಣೆ ಮಾಡಿದ್ದೀರಿ ? ಇದರಲ್ಲೂ ಲೂಟಿ ಹೊಡೆಯೋಕೆ ಪ್ಲಾನ್ ಇದೆಯಲ್ಲಾ. ಇವರು ಹೇಗೆಲ್ಲಾ ಕಮಿಷನ್ ಹೊಡೆಯುತ್ತಾರೆ ಎನ್ನುವುದು ನನಗೆ ಗೊತ್ತಿದೆ. ಈ ರೀತಿ ಹಣ ಹಂಚೋದಾದ್ರೆ ರೈತರಿಗೆ ಏನು ಕೊಡ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಿ.ಕೆ ಹರಿಪ್ರಸಾದ್ ವಿಚಾರವಾಗಿ ಮಾತನಾಡಿದ ಎಚ್ಡಿಕೆ ಬಿ.ಕೆ ಹರಿಪ್ರಸಾದ್ ಮಾತ್ರವಲ್ಲ. ಅಲ್ಲಿ ಇನ್ನೂ ಅನೇಕರಿದ್ದಾರೆ. ಮುಂದೆ ಎಲ್ಲಾ ಧ್ವನಿ ಹೊರಬರುತ್ತದೆ. ಕೇಂದ್ರ ಸರ್ಕಾರದ ಬಳಿ ಹೋಗಿ 50 ಜನ ಕರೆದುಕೊಂಡು ಬರುತ್ತೇವೆ ಎಂದು ಹೊರಟಿದ್ದಾರೆ. ಅವರ ಹಗರಣಗಳನ್ನು ಮುಚ್ಚಿ ಹಾಕಿಕೊಳ್ಳೋದಕ್ಕೆ ಹೋಗಿದ್ದಾರೆ. ಇಂದು ಹರಿಪ್ರಸಾದ್ ಅವರನ್ನು ಹೊರತುಪಡಿಸಿ ಒಂದು ಸಮಾವೇಶ ಮಾಡ್ತಿಲ್ವಾ ? ಯಾಕೆ ಮಾಡ್ತಿದ್ದಾರೆ ಅನ್ನೋದು ನನಗೆ ಗೊತ್ತು. ಯಾರನ್ನೋ ಬಿಟ್ಟು ಐದಾರು ತಿಂಗಳು ರಿಲೀಫ್ ಕೊಡಿ ಅಂತಾ ಹೋಗಿದ್ದು ಗೊತ್ತು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.





