ಕಾಡುಗಳ್ಳ ಎಂದೇ ಕುಖ್ಯಾತಿಯನ್ನು ಹೊಂದಿದ್ದ ವೀರಪ್ಪನ್ ಪುತ್ರಿ ವಿದ್ಯಾರಾಣಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಲ್ಲಿ ಎನ್ಟಿಕೆ ( ನಾಮ್ ತಮಿಳರ್ ಕಚ್ಚಿ ) ಪಕ್ಷದಿಂದ ವಿದ್ಯಾರಾಣಿ ಸ್ಪರ್ಧೆಗೆ ಇಳಿದಿದ್ದಾರೆ.
ತಮಿಳುನಾಡು ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆಯಾಗಿದ್ದ ವೀರಪ್ಪನ್ ಪುತ್ರಿ ಇದೇ ಕೃಷ್ಣಗಿರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಎನ್ಟಿಕೆ ಪಕ್ಷದ ಅಭ್ಯರ್ಥಿಯಾಗಿ ವಿದ್ಯಾರಾಣಿ ಕಣಕ್ಕಿಳಿದಿದ್ದು, ನಿನ್ನೆ ( ಮಾರ್ಚ್ 24 ) ಸಿ.ನರಸಿಂಹನ್ ಎಂಬುವವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.
ಇನ್ನು ಟಿಕೆಟ್ ಘೋಷಣೆ ಮಾಡಿದ ಬಳಿಕ ಮಾತನಾಡಿದ ಎನ್ಟಿಕೆ ಪಕ್ಷದ ಮುಖ್ಯಸ್ಥ ಸೀಮನ್ ʼಅವರ ತಂದೆ ಅರಣ್ಯವನ್ನು ರಕ್ಷಿಸಿದ್ದರು. ಅವರ ಮಗಳು ಈಗ ತಮಿಳರನ್ನು ರಕ್ಷಿಸುತ್ತಿದ್ದಾರೆʼ ಎಂದು ಹೇಳಿಕೆಯನ್ನು ನೀಡಿದರು.





