Mysore
24
light rain

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಕುರುಕ್ಷೇತ್ರದಲ್ಲಿ ಕೃಷ್ಣನ ಮೂರ್ತಿ ಕೆತ್ತಲಿದ್ದಾರೆ ಬಾಲರಾಮ ಮೂರ್ತಿ ಖ್ಯಾತಿಯ ಅರುಣ್‌ ಯೋಗಿರಾಜ್‌

ಇತ್ತೀಚೆಗಷ್ಟೆ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಬಾಲರಾಮನ ವಿಗ್ರಹವನ್ನು ನಿರ್ಮಿಸಿದ್ದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ದೇಶವ್ಯಾಪಿ ಹೆಸರನ್ನು ಮಾಡಿದ್ದರು.

ಈ ಮಹಾ ಪುಣ್ಯಕ್ಷೇತ್ರಕ್ಕೆ ಅರುಣ್‌ ಯೋಗಿರಾಜ್‌ ಕೆತ್ತಿದ ಬಾಲರಾಮನ ವಿಗ್ರಹ ಆಯ್ಕೆಯಾದದ್ದು ಶಿಲ್ಪಿಗೆ ದೊಡ್ಡಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿತ್ತು. ಇದಾದ ಬೆನ್ನಲ್ಲೆ ಇದೀಗ ಅರುಣ್‌ ಯೋಗಿರಾಜ್‌ ಮತ್ತೊಂದು ಮಹಾ ವಿಗ್ರಹದ ನಿರ್ಮಾಣಕ್ಕೆ ಕೈಹಾಕಲು ಮುಂದಾಗಿದ್ದಾರೆ.

ಹೌದು, ಹರಿಯಾಣದ ಕುರುಕ್ಷೇತ್ರದ ಬ್ರಹ್ಮ ಸರೋವರದ ಪೂರ್ವ ದಂಡೆಯಲ್ಲಿ ನಿರ್ಮಾಣವಾಗುತ್ತಿರುವ 18 ಅಂತಸ್ತಿನ ಜ್ಞಾನ ಮಂದಿರದ ಗರ್ಭ ಗುಡಿಯಲ್ಲಿ ಸ್ಥಾಪಿಸಲು ಕೃಷ್ಣನ ವಿಗ್ರಹವನ್ನು ಕೆತ್ತಲು ಅರುಣ್‌ ಯೋಗಿರಾಜ್‌ ಅವರ ಜತೆ ಮಾತುಕತೆ ನಡೆಸಲಾಗಿದೆ ಎಂದು ಬ್ರಹ್ಮಪುರಿ ಅನ್ನಕ್ಷೇತ್ರ ಟ್ರಸ್ಟ್‌ ಜ್ಞಾನ ಮಂದಿರ ಸಂಸ್ಥಾಪಕ ಸ್ವಾಮಿ ಚಿರಂಜೀವಪುರಿ ಮಹಾರಾಜ್‌ ತಿಳಿಸಿದ್ದಾರೆ.

3 ಎಕರೆ ಜಾಗದಲ್ಲಿ 18 ಅಂತಸ್ತಿನ ಜ್ಞಾನ ಮಂದಿರ ನಿರ್ಮಾಣವಾಗುತ್ತಿದ್ದು, ದೇವಾಲಯದ ಗರ್ಭಗುಡಿಯಲ್ಲಿ ಅರ್ಜುನನಿಗೆ ಸಂದೇಶ ನೀಡುತ್ತಿರುವ ಶ್ರೀಕೃಷ್ಣನ ದೈತ್ಯ ರೂಪವನ್ನು ಪ್ರತಿಷ್ಠಾಪಿಸಲಾಗುವುದು. ಇದಕ್ಕಾಗಿ ಅರುಣ್‌ ಯೋಗಿರಾಜ್‌ ಅವರ ಜತೆ ಚರ್ಚೆ ನಡೆಸಲಾಗಿದೆ. ಟ್ರಸ್ಟ್‌ ಸಹ ಯೋಜನೆ ಸಿದ್ಧಪಡಿಸಿದ್ದು, ಶೀಘ್ರದಲ್ಲಿಯೇ ಅರುಣ್‌ ಯೋಗಿರಾಜ್‌ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಸ್ವಾಮಿ ಚಿರಂಜೀವಪುರಿ ಮಹಾರಾಜ್‌ ಹೇಳಿಕೆ ನೀಡಿದ್ದಾರೆ.

ಅಲ್ಲದೇ ಟ್ರಸ್ಟ್‌ನ ಮುಖ್ಯಸ್ಥ ರಾಜೇಶ್‌ ಗೋಯಲ್‌ ಸಹ ಈ ಕುರಿತು ಮಾತನಾಡಿದ್ದು, ಅರುಣ್‌ ಯೋಗಿರಾಜ್‌ ಅವರ ಜತೆ ಚರ್ಚಿಸಿದ ಬಳಿಕ ನೇಪಾಳದ ಗಂಡಕಿ ನದಿಯಲ್ಲಿ ವಿಶೇಷ ಸಾಲಿಗ್ರಾಮ ಶಿಲೆಯನ್ನು ತರಲು ನಿರಂತರವಾಗಿ ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!