ನವದೆಹಲಿ: ಲೋಕಸಭಾ ಚುನಾವಣೆ ಕುರಿತಂತರ ಬಹಿರಂಗ ಚರ್ಚೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನಿವೃತ್ತ ನ್ಯಾಯಮೂರ್ತಿಗಳು ಪಂಥಹ್ವಾನ ನೀಡಿದ್ದಾರೆ.
ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶರಾದ ಮದನ್ ಬಿ ಲೋಕೂರ್, ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಎಪಿ ಶಾ ಮತ್ತು ದಿ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಎನ್ ರಾಮ್ ಅವರು ಈ ಇಬ್ಬರು ನಾಯಕರಿಗೆ ಸವಾಲ್ ಎಸೆದಿದ್ದಾರೆ.
ಈ ಸಂಬಂಧ ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿಗೆ ಈ ಮೂವರು ಪತ್ರ ಬರೆದಿದ್ದು, ವಿವಿಧ ಕ್ಷೇತ್ರಗಳಲ್ಲಿ ನಮ್ಮ ಕರ್ತವ್ಯವನ್ನು ನಿಭಾಯಿಸಿದ ನಾಗರೀಕರಾಗಿ ನಿಮಗೆ ನಾವು ಪತ್ರ ಬರೆಯುತ್ತಿದ್ದೇವೆ. ನಾವು ಪಕ್ಷಾತೀತವಾಗಿದ್ದು, ಪಕ್ಷಾತೀತ ಮತ್ತು ವಾಣಿಜ್ಯೇತರ ಬಹಿರಂಗ ಸಭೆಯೆ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ ಎಂದಿದ್ದಾರೆ.
ವಿಶ್ವ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಚುನಾವಣೆಯನ್ನು ಎಲ್ಲರೂ ನೋಡುತ್ತಿದ್ದಾರೆ. ಸಾರ್ವಜನಿಕ ಚರ್ಚೆಯಿಂದ ಉತ್ತಮ, ಆರೋಗ್ಯಕರ ಪ್ರಜಾಪ್ರಭುತ್ವದ ಚಿತ್ರಣವನ್ನು ತೆರೆದಿಡುವ ಅವಕಾಶ ಇದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾವು ಸಾರ್ವಜನಿಕರಾಗಿ ಎರಡೂ ಕಡೆಯಿಂದ ಆರೋಪ ಮತ್ತು ಪ್ರತ್ಯಾರೋಪಗಳನ್ನು ಕೇಳಿದ್ದೇವೆ. ಆದರೆ ಅದಾವುದಕೂ ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ನಾವು ಈವರೆಗೆ ನೋಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಡಿಜಿಟಲ್ ಯುಗದಲ್ಲಿ ಸತ್ಯಕ್ಕಿಂತ ಸುಳ್ಳಿನ ಮಾಹಿತಿಗಳೇ ವೇಗವಾಗಿ ಎಲ್ಲಡೆ ಹರಡುತ್ತಿದ್ದು, ನಿಜಾಂಶ ತಿಳಿಯುವ ಮೂಲಕ ಪ್ರಜಾಪ್ರಭುತ್ವದ ಉಳಿವಿಗೆ ಸಾರ್ವಜನಿಕ ಚರ್ಚೆ ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.





