ನವದೆಹಲಿ: ಉದ್ಯಮಿ ಗೌತಮ್ ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಸಂಸತ್ ಆವರಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಈ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಹಾಗೂ ಅದಾನಿ ಮುಖವಾಡ ಧರಿಸಿದ್ದ ವ್ಯಕ್ತಿಯನ್ನು ಸಂದರ್ಶನ ಮಾಡಿದ್ದಾರೆ.
ಸಂಸತ್ ಭವನದ ಆವರಣದಲ್ಲಿ ಇಂದು(ಡಿ.9) ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇನ್ನಿತರ ವಿರೋಧ ಪಕ್ಷಗಳು ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ವೇಳೆ ಮೋದಿ ಅದಾನಿ ಏಕ್ ಹೈ ಎಂದು ಘೋಷಣೆಗಳನ್ನು ಕೂಗಿದ್ದಾರೆ.
ಈ ವೇಳೆ ರಾಹುಲ್ ಗಾಂಧಿ ಅವರು, ಅದಾನಿ ಮುಖವಾಡ ಧರಿಸಿದ್ದ ನಾಯಕನ ಬಳಿ ಅಣಕು ಸಂದರ್ಶನ ಮಾಡಿ ಸಂಸತ್ತಿನ ಕಲಾಪಗಲು ಯಾಕೆ ಸುಗಮವಾಗಿ ನಡೆಯಲು ಬಿಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ನೀಡಿದ ನಾಯಕ ಪ್ರತಿಕ್ರಿಯಿಸಿ ಅದನ್ನು ನಾವು ಅಮಿತ್ ಶಾ ಅವರನ್ನು ಕೇಳಬೇಕು. ಅವರು ಸಂಸತ್ ಸದನ ಕಲಾಪದಿಂದ ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಇಬ್ಬರ ಹತ್ತಿರ ಮೋದಿ, ಅದಾನಿ ನಡುವಿನ ಸಂಬಂಧದ ಬಗ್ಗೆ ಕೇಳಿದಾಗ ಆ ನಾಯಕರು ನಾವಿಬ್ಬರೂ ಒಂದೇ, ನಾನು ಹೇಳುವುದನ್ನೇ ಮೋದಿ ಅವರು ಪಾಲಿಸುತ್ತಾರೆ. ಅದು ವಿಮಾನ ನಿಲ್ದಾಣವೇ ಆಗಿರಲಿ ಅಥವಾ ಬೇರೆ ಏನೇ ಆಗಿರಲಿ ಎಂದು ಉತ್ತರ ನೀಡಿದ್ದಾರೆ.





