ಅಹಮದಾಬಾದ್ : ಇಲ್ಲಿನ ಸರ್ಧರ್ ವಲ್ಲಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಭೀಕರ ಅಪಘಾತಕ್ಕೀಡಾಗಿ 270 ಜನರನ್ನು ಬಲಿ ತೆಗೆದುಕೊಂಡ ನಾಲ್ಕು ದಿನಗಳ ನಂತರ, ಡಿಎನ್ಎ ಹೊಂದಾಣಿಕೆಯ ಮೂಲಕ ಇದುವರೆಗೆ 99 ಸಂತ್ರಸ್ತರನ್ನು ಗುರುತಿಸಲಾಗಿದ್ದು, 64 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ವಿಮಾನ ಅಪಘಾತದ ನಂತರ ಅನೇಕ ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಅವರ ಗುರುತನ್ನು ಪತ್ತೆಹಚ್ಚಲು ಅಧಿಕಾರಿಗಳು ಡಿಎನ್ಎ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ 99 ಡಿಎನ್ಎ ಮಾದರಿಗಳನ್ನು ಹೊಂದಿಸಲಾಗಿದೆ ಮತ್ತು 64 ದೇಹಗಳನ್ನು ಈಗಾಗಲೇ ಆಯಾ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಈ ಮೃತರು ಗುಜರಾತ್ನ ವಿವಿಧ ಭಾಗಗಳಾದ ಭರೂಚ್, ಆನಂದ್, ಜುನಾಗಢ, ಭಾವನಗರ, ವಡೋದರಾ, ಖೇಡಾ, ಮೆಹ್ಸಾನಾ, ಅರವಲ್ಲಿ ಮತ್ತು ಅಹಮದಾಬಾದ್ ಜಿಲ್ಲೆಗಳಿಂದ ಬಂದವರು ಎಂದು ಹೆಚ್ಚುವರಿ ಸಿವಿಲ್ ಸೂಪರಿಂಟೆಂಡೆಂಟ್ ಡಾ ರಜನೀಶ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.
ಜೂನ್ 12 ರಂದು ಮಧ್ಯಾಹ್ನ 1.39ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ 242 ಜನರೊಂದಿಗೆ ಬೋಯಿಂಗ್ 787-8 ಡ್ರೀಮ್ಲೈನರ್ ಅಹಮದಾಬಾದ್ನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು.
ಲಂಡನ್ಗೆ ತೆರಳುತ್ತಿದ್ದ ವಿಮಾನದಲ್ಲಿದ್ದ 241 ಮಂದಿ ಸಾವನ್ನಪ್ಪಿದ್ದರೆ, ಓರ್ವ ಪ್ರಯಾಣಿಕ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಅಲ್ಲದೆ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿದಂತೆ ನೆಲದ ಮೇಲಿನ ದುರಂತದಲ್ಲಿ 29 ಜನರು ಸಾವನ್ನಪ್ಪಿದ್ದರು.





