ಚೆನ್ನೈ: ಹಿಂದಿ ಮಾಸಾಚರಣೆ ನೆಪದಲ್ಲಿ ಕೇಂದ್ರ ಸರ್ಕಾರದಿಂದ ನೇಮಕವಾದ ರಾಜ್ಯಪಾಲರು ದೇಶದ ಏಕತೆಯನ್ನು ಮರೆತು, ಕೇಂದ್ರ ಯೋಜನೆಗಳು ಮತ್ತು ಘೋಷಣೆಗಳಂತೆ ʼಎಲ್ಲೆಡೆ ಹಿಂದಿ-ಎಲ್ಲವೂ ಹಿಂದಿʼ ಎಂಬ ತನ್ನ ನೀತಿಯನ್ನು ಹೇರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು, ಹಿಂದಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಹಿಂದಿ ವಿರುದ್ಧ ಅವಹೇಳನ, ಆಕ್ಷೇಪಗಳಿಗೆ ಕ್ಷಮೆಯಿದೆ. ರಾಜ್ಯಾದ್ಯಂತ ಹಿಂದಿ ಕಲಿಕೆ ಕುರಿತು ಹೆಚ್ಚು ಆಸಕ್ತಿ ಹೊಂದುತ್ತಿರುವುದನ್ನು ಕಂಡಿದ್ದೇನೆ ಎಂದು ಹೇಳಿಕೆ ನೀಡಿದ್ದರು. ರಾಜ್ಯಪಾಲರ ಈ ಹೇಳಿಕೆಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಎಂ.ಕೆ.ಸ್ಟಾಲಿನ್ ಅವರು, ಹಿಂದಿ ಭಾಷೆಯು ಪ್ರಧಾನ ಆಡು ಭಾಷೆಯಾಗಿದ್ದು, ಹಿಂದಿ ಮಾತನಾಡದಿರುವ ರಾಜ್ಯದಲ್ಲಿ ಹಿಂದಿ ಮಾಸಾಚರಣೆ ಕಾರ್ಯಕ್ರಮಗಳು ಸರಿಯಲ್ಲ. ಅಲ್ಲದೇ, ಇಂತಹ ಆಚರಣೆಗಳು ಪ್ರಾದೇಶಿಕ ಭಾಷೆಗಳನ್ನು ತುಳಿಯಲು ಮಾಡಲಾಗಿರುವ ಸಂಚು ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ನಾನು ರಾಜ್ಯಪಾಲರ ಭಾಷಣವನ್ನು ಖಂಡಿಸುತ್ತೇನೆ. ಈ ಬಗ್ಗೆ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರು ಗಮನಹರಿಸಬೇಕು ಎಂದು ಪೋಸ್ಟ್ ಮಾಡಿದ್ದಾರೆ.