ಹೊಸದಿಲ್ಲಿ: ಯುವ ಉದ್ಯಮಿ ಜೆರೋಧಾ ಮುಖ್ಯಸ್ಥ ನಿಖಿಲ್ ಕಾಮತ್ ಅವರೊಂದಿಗೆ ತಮ್ಮ ಮೊದಲ ಪಾಡ್ಕ್ಯಾಸ್ಟ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ವೇಳೆ ಮೋದಿ ಅವರು ತಮ್ಮ ಜೀವನದಲ್ಲಿ ಎದುರಿಸಿದ ಅತಿದೊಡ್ಡ ಸವಾಲುಗಳಲ್ಲಿ ಒಂದಾದ 2002ರ ಗುಜರಾತ್ ಗಲಭೆಯ ಬಗ್ಗೆಯು ಮಾಹಿತಿ ಹಂಚಿಕೊಂಡಿದ್ದಾರೆ.
2002ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದಾಗ, ಮೂರು ದಿನದಲ್ಲಿ ಗೋಧ್ರಾ ಘಟನೆ ನಡೆಯಿತು. ಅದು 2002 ಫೆಬ್ರವರಿ 27, ಅಂದು ರೈಲಿಗೆ ಬೆಂಕಿ ಬಿದ್ದಿದೆ ಎಂದು ಮೊದಲ ಬಾರಿಗೆ ನನಗೆ ಮಾಹಿತಿ ಬಂತು. ಕೆಲ ಹೊತ್ತಿನಲ್ಲಿ ಸಾವುಗಳ ಕುರಿತು ವರದಿ ಬರಲಾರಂಭಿಸಿದವು. ಇದೆಲ್ಲಾ ನಡೆಯುವಾಗ ನಾನು ವಿಧಾನಸಭೆಯ ಒಳಗೆ ಇದ್ದೆ. ಇದೆಲ್ಲಾ ನನಗೆ ಚಿಂತೆ ಉಂಟು ಮಾಡಿತ್ತು ಎಂದು ಮೋದಿ ಹೇಳಿದ್ದಾರೆ.
ತಕ್ಷಣ ವಿಧಾನಸಭೆಯಿಂದ ಹೊರಗೆ ಬಂದು ಗೋಧ್ರಾಗೆ ಭೇಟಿ ನೀಡಬೇಕು ಎಂದು ಹೊರಟೆ. ಆದರೆ ಆವಾಗ ಇದ್ದದ್ದು ಒಂದೇ ಹೆಲಿಕಾಪ್ಟರ್. ಅದು ಸಿಂಗಲ್ ಇಂಜಿನ್ ಆಗಿರುವ ಕಾರಣ, ವಿಐಪಿಗಳು ಪ್ರಯಾಣ ಮಾಡಬಾರದು ಎಂದಿದ್ದರು. ಬಳಿಕ ನಾನು ಮಾತುಕತೆ ನಡೆಸಿ, ಏನಾದರೂ ನಾನೇ ಜವಾಬ್ದಾರಿ ಎಂದು ಅವರಿಗೆ ಹೇಳಿ ಗೋಧ್ರಾಗೆ ಹೆಲಿಕಾಪ್ಟಾರ್ ಹತ್ತಿದೆ.
ಅಲ್ಲಿ ತಲುಪಿದ ಮೇಲೆ ಅಲ್ಲಿನ ಸಾವು ನೋವಿನ ದೃಶ್ಯಗಳು, ಮೃತದೇಹಗಳನ್ನು ನೋಡಿ ಜೀವನದ ಕೆಟ್ಟ ದುಃಖವನ್ನು ಅಲ್ಲಿ ಅನುಭವಿಸಿದೆ ಎಂದಿದ್ದಾರೆ.
ಅಂದು ಅಯೋಧ್ಯಯಿಂದ ಬರುತ್ತಿದ್ದ ಹಿಂದೂ ಭಕ್ತಾದಿಗಳು ಹಾಗೂ ಕರಸೇವಕರಿದ್ದ ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಕೋಚ್ಗೆ ಮತಾಂಧರು ಬೆಂಕಿಹಚ್ಚಿದ್ದರು. 59 ಮಂದಿ ಸುಟ್ಟು ಕರಕಲಾಗಿದ್ದರು. ಯಾರೊಬ್ಬರ ಮೃತದೇಹಗಳನ್ನು ಗುರುತಿಸುವ ಸ್ಥಿತಿ ಇರಲಿಲ್ಲ. ಅದು ಘನಘೋರ ಘಟನೆ. ಈ ಬೆನ್ನಲ್ಲೇ ಗುಜರಾತ್ ಇತಿಹಾಸದಲ್ಲಿಯೇ ಕಂಡ ಅತಿದೊಡ್ಡ ಕೋಮುಗಲಭೆ ಉಂಟಾಗಿತ್ತು ಎಂದು ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.





