ಮೃತರ ಸಂಖ್ಯೆ 750 ಕ್ಕೆ ಏರಿಕೆ; 3,044 ನಾಪತ್ತೆ
ಕಠ್ಮಂಡು : ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಹಿಮಪಾತ ಹಾಗೂ ಹಠಾತ್ ಪ್ರವಾಹದಿಂದಾಗಿ ಭಾರೀ ಸಾವು ನೋವು ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಟಿಬೆಟ್ನಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಅಲ್ಲಿ 546 ಮಂದಿ ನಾಪತ್ತೆಯಾಗಿದ್ದಾರೆ. ಎರಡೂ ಪ್ರದೇಶಗಳನ್ನು ಒಟ್ಟುಗೂಡಿಸಿದರೆ ಸಾವಿನ ಸಂಖ್ಯೆ ಕನಿಷ್ಠ 750 ಮತ್ತು ಕಾಣೆಯಾದವರ ಸಂಖ್ಯೆ 3,044 ಆಗಿದೆ. ನೇಪಾಳ ಮತ್ತು ಟಿಬೆಟ್ನಲ್ಲಿ ಸುಮಾರು 3,000ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.
ಆಗಸ್ಟ್ 26 ರ ಬೆಳಿಗ್ಗೆ ಹಿಮಾಲಯದ ಎತ್ತರ ಪ್ರದೇಶದಲ್ಲಿ ಹಿಮನದಿಯ ಒಂದು ದೊಡ್ಡ ಭಾಗ ಕುಸಿದು, ಹಿಮ, ಬಂಡೆ, ಮಣ್ಣು ಮತ್ತು ನೀರಿನ ಭಾರೀ ಪ್ರವಾಹವನ್ನು ಕೆಳಭಾಗದ ನದಿ ಕಣಿವೆಗಳತ್ತ ತಳ್ಳಿತು. ಈ ಪ್ರವಾಹವು ಲ್ಹೆಂಡೆ ಖೋಲಾ ಮೂಲಕ ಭೋಟೆ ಕೋಶಿ ಮತ್ತು ನಂತರ ತ್ರಿಶೂಲಿ ನದಿ ವ್ಯವಸ್ಥೆಯನ್ನು ಪ್ರವೇಶಿಸಿ, ರಸುವಾ, ನುವಾಕೋಟ್ ಮತ್ತು ಧಾದಿಂಗ್ ಜಿಲ್ಲೆಗಳಲ್ಲಿ ಭಾರೀ ವಿನಾಶ ಉಂಟುಮಾಡಿತ್ತು.




