Mysore
25
few clouds

Social Media

ಬುಧವಾರ, 11 ಫೆಬ್ರವರಿ 2026
Light
Dark

ಕೆನಡಾದಲ್ಲಿ ಕನ್ನಡಿಗನ ಬರ್ಬರ ಹತ್ಯೆ

ಟೊರೆಂಟೊ: ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಮೂಲದ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿರುವ ಘಟನೆ ಕೆನಡಾದಲ್ಲಿ ನಡೆದಿದೆ.

ಚಂದನ್‍ಕುಮಾರ್(37) ಹತ್ಯೆಯಾದ ವ್ಯಕ್ತಿ. ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕಳೆದ ರಾತ್ರಿ ಕೆನಡಾದ ಟೊರೆಂಟೊದ ವುಡ್‍ಬೈನ್ ಮಾಲ್ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಘಟನೆ ತಿಳಿಯುತ್ತಿದ್ದಂತೆ ಆತನ ಸ್ನೇಹಿತರು ಸ್ಥಳಕ್ಕೆ ಹೋಗಿ ನೋಡಿದಾಗ ಚಂದನ್‍ಕುಮಾರ್ ಮೃತಪಟ್ಟಿರುವುದು ಗೊತ್ತಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆಯಿಂದಾಗಿ ಇಲ್ಲಿನ ಭಾರತೀಯ ಸಮುದಾಯ ಆತಂಕಗೊಂಡಿದೆ. ಕೆನಡಾದಲ್ಲಿ ಭಾರತೀಯರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿದ್ದು, ಈಗ ಚಂದನ್ ಹತ್ಯೆಯಾಗಿದ್ದಾರೆ.

ಚಂದನ್‍ಕುಮಾರ್ ಅವರ ಕುಟುಂಬದ ಜೊತೆ ಸಂಪರ್ಕದಲ್ಲಿದ್ದು, ಅವರ ನೆರವಿಗೆ ಸಿದ್ಧರಿದ್ದೇವೆ. ಘಟನೆಯನ್ನು ಖಂಡಿಸಿದ್ದೇವೆ. ಶೀಘ್ರದಲ್ಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಪೊಲೀಸ್ ಕಚೇರಿಯನ್ನು ಆಗ್ರಹಿಸಿದ್ದೇವೆ ಎಂದು ರಾಯಭಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತ್ಯಾಮಗೊಂಡ್ಲುವಿನಲ್ಲಿರುವ ಚಂದನ್ ಕುಟುಂಬದವರು ಆತಂಕಗೊಂಡಿದ್ದಾರೆ. ಏನಾಗಿದೆ ಎಂಬುದು ನಮಗೆ ತಿಳಿಯುತ್ತಿಲ್ಲ. ಆತ ಮೃತಪಟ್ಟಿದ್ದಾನೆಂಬ ಸುದ್ದಿ ಕೇಳಿಬಂದಿದೆ ಎಂದು ಕಣ್ಣೀರು ಹಾಕಿದ್ದಾರೆ.

ತ್ಯಾಮಗೊಂಡ್ಲುವಿನ ನಿವೃತ್ತ ಶಿಕ್ಷಕ ನಂದೀಶ್ ಅವರ ಪುತ್ರ ಚಂದನ್‍ಕುಮಾರ್ ಅವರು ವಿದ್ಯಾಭ್ಯಾಸದ ನಂತರ ಅವರ ಸ್ನೆಹಿತರ ಜೊತೆಗೂಡಿ ಕೆನಡಾಕ್ಕೆ ಉದ್ಯೋಗಕ್ಕೆ ತೆರಳಿದ್ದರು. ಅಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ನಿನ್ನೆ ಎಂದಿನಂತೆ ಅಪಾರ್ಟ್‍ಮೆಂಟ್‍ನಲ್ಲಿ ಸ್ನೇಹಿತರೊಂದಿಗೆ ಕಾಲ ಕಳೆದಿದ್ದರು.

ಈ ವೇಳೆ ಚಂದನ್‍ಕುಮಾರ್‌ಗೆ ದೂರವಾಣಿ ಕರೆ ಬಂದಿದ್ದು, ಕರೆ ಸ್ವೀಕರಿಸಿ ಹೊರಬಂದಾಗ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Tags:
error: Content is protected !!