ನವದೆಹಲಿ: ಮುಂದೆ ನಡೆಯುವ ಮಹಾಕುಂಭ ಮೇಳವು ದೇಶದಲ್ಲಿ ಏಕತೆಯ ಭಾವವನ್ನು ಬಿತ್ತಿ, ದ್ವೇಷ ಮತ್ತು ಸಮಾಜ ವಿಭಜನೆಯನ್ನು ತೊಡೆದು ಹಾಕುವ ಧಾರ್ಮಿಕ ಸಭೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ.
ಇಂದು ತಮ್ಮ ಮಾಸಿಕ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 117ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಡೀ ದೇಶವನ್ನು ಒಗ್ಗೂಡಿಸುವುದು ಈ ಮಹಾಕುಂಭ ಮೇಳದ ಬಹುಮುಖ್ಯ ಸಂದೇಶವಾಗಿರಬೇಕು ಎಂದರು.
ಪ್ರತಿ 12 ವರ್ಷಕ್ಕೊಮ್ಮೆ ಈ ಮಹಾ ಕುಂಭಮೇಳ ನಡೆಯಲಿದೆ. ಈ ಬಾರಿ ಜನವರಿ.13 ರಂದು ಪ್ರಯಾಗ್ರಾಜ್ನಲ್ಲಿ ಈ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದೆ.
ಈ ಕುಂಭ ಮೇಳದಲ್ಲಿ ಭಾಗವಹಿಸುವ ಜನತೆಯನ್ನು ಉದ್ದೇಶಿಸಿ ʼವಿವಿಧತೆಯಲ್ಲಿ ಏಕತೆʼ ಎಂಬುದು ನಮ್ಮ ದೇಶದ ವೈಶಿಷ್ಟ್ಯ. ಇದನ್ನು ಪ್ರಚಾರ ಮಾಡುವುದಕ್ಕಿಂತ ಬೇರೆ ವಿಷಯ ಯಾವುದು ಇಲ್ಲ ಸಂತಸ ವ್ಯಕ್ತಪಡಿಸಿದರು.
ಮುಂದಿನ ಗಣರಾಜ್ಯೋತ್ಸವಕ್ಕೆ ಭಾರತದ ಸಂವಿಧಾನ ಜಾರಿಯಾಗಿ 75ನೇ ವಾರ್ಷಿಕೋತ್ಸವ ಆಗಿದೆ. ಸಂವಿಧಾನದಿಂದಲೇ ನಾನು ಈ ಸ್ಥಾನಕ್ಕೆ ಬರಲು ಸಾಧ್ಯವಾಯಿತು. ಸಂವಿಧಾನ ಜಾರಿಯಾದ ದಿನದಿಂದ ಇಲ್ಲಿಯವರೆಗೂ ಪ್ರತಿಯೊಬ್ಬ ವ್ಯಕ್ತಿಗೂ ಮಾರ್ಗದರ್ಶನ ನೀಡುವ ಬೆಳಕಾಗಿದೆ ಎಂದರು.
ಜನರನ್ನು ಸಂವಿಧಾನದ ನಿಬಂಧನೆಗಳು ಮತ್ತು ಆತ್ಮದೊಂದಿಗೆ ಸಂಪರ್ಕಿಸಲು constitution75.com ಎಂಬ ವೆಬ್ಸೈಟ್ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಾಂವಿಧಾನಿಕ ಮೌಲ್ಯಗಳು ಮತ್ತು ಚೈತನ್ಯವನ್ನು ಬಲಪಡಿಸುವ ತಮ್ಮ ಸರ್ಕಾರದ ಪ್ರಯತ್ನಗಳು ನಿರಂತರವಾಗಿವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದ ಮಾರ್ಗದರ್ಶಿ ದಾಖಲೆಯನ್ನೇ ಬುಡಮೇಲು ಮಾಡಿದ್ದರು ಎಂದು ಆರೋಪಿಸಿದರು.




