ನವದೆಹಲಿ: ಶೀಘ್ರದಲ್ಲೇ ಭಾರತವು ತನ್ನದೇ ಆದ ಸ್ವಂತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವತ್ತ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಪ್ರಯುಕ್ತ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಬಾಹ್ಯಾಕಾಶದಲ್ಲಿ ಭಾರತವು ಸ್ವಂತ ನಿಲ್ದಾಣವನ್ನು ಹೊಂದಬೇಕೆಂಬುದು ದಶಕಗಳ ಕನಸು. ಅದು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಎಂದು ಹೇಳಿದರು.
ಇತ್ತೀಚೆಗಷ್ಟೇ ಬಾಹ್ಯಾಕಾಶಕ್ಕೆ ತೆರಳಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶವು ಶೀಘ್ರದಲ್ಲೇ ಗಗನಯಾತ್ರಿಗಳ ತಂಡವನ್ನು ರಚನೆ ಮಾಡಲಿದೆ. ಯುವಜನರು ಇದರಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕೆಂದು ಕರೆ ಕೊಟ್ಟರು.
ಮೂರು ದಿನಗಳ ಹಿಂದೆ ನಾನು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಭೇಟಿಯಾದೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆ ತುಂಬಿದರು. ಅವರು ನನಗೆ ತ್ರಿವರ್ಣ ಧ್ವಜವನ್ನು ತೋರಿಸುತ್ತಿದ್ದ ಕ್ಷಣ, ಅನುಭವ ಪದಗಳಿಗೆ ಮೀರಿದ್ದು ಎಂದು ಹೇಳಿದರು.
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗಿನ ನನ್ನ ಚರ್ಚೆಯಲ್ಲಿ, ನವ ಭಾರತದ ಯುವಕರ ಅಪಾರ ಧೈರ್ಯ ಮತ್ತು ಅನಂತ ಕನಸುಗಳನ್ನು ನಾನು ನೋಡಿದ್ದೇನೆ. ಈ ಕನಸುಗಳನ್ನು ಮುಂದಕ್ಕೆ ಕೊಂಡೊಯ್ಯಲು, ನಾವು ಭಾರತದ ಗಗನಯಾತ್ರಿಗಳ ಗುಂಪನ್ನು ಸಹ ಸಿದ್ಧಪಡಿಸಲಿದ್ದೇವೆ. ಇಂದು ಬಾಹ್ಯಾಕಾಶ ದಿನದಂದು, ಭಾರತದ ಕನಸುಗಳಿಗೆ ರೆಕ್ಕೆಗಳನ್ನು ನೀಡಲು ಈ ಗಗನಯಾತ್ರಿಗಳ ಗುಂಪಿಗೆ ಸೇರಲು ನಾನು ನನ್ನ ಯುವ ಸ್ನೇಹಿತರನ್ನು ಆಹ್ವಾನಿಸುತ್ತೇನೆ ಎಂದು ನುಡಿದರು.





