ಚಂಡೀಗಡ: ಕೇಂದ್ರ ಸರ್ಕಾರ ಫೆ.14 ರಂದು ಮಾತುಕತೆಗೆ ಆಹ್ವಾನಿಸುತ್ತಿದ್ದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನವೆಂಬರ್ 26 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ರೈತ ನಾಯಕ ದಲ್ಲೆವಾಲ್ ಮತ್ತು 121 ಮಂದಿ ರೈತರು ಉಪವಾಸ ಅಂತ್ಯಗೊಳಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರ ಬಂದಾಗಿನಿಂದ ರೈತರ ಮೇಲೆ ದಬ್ಬಾಳಿಕೆ ಮಾಡುವಂತಹ ಕೃಷಿ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ. ಇದರಿಂದ ರೈತರು ಸಮಸ್ಯೆಗೆ ಈಡಾಗುತ್ತಿದ್ದಾರೆ ಎಂದು ರೈತ ನಾಯಕ ದಲ್ಲೆವಾಲ್ ನ.26 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.
ಅವರ ಆರೋಗ್ಯವು ಹದಗೆಟ್ಟಿದ್ದರಿಂದ ಮತ್ತು ಸರ್ಕಾರವು ರೈತರ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಜನವರಿ ತಿಂಗಳು 121 ಮಂದಿ ರೈತರು ಹರಿಯಾಣದ ಖನೌರಿ ಬಳಿ ದಲ್ಲೆವಾಲ್ ಅವರ ಉಪವಾಸ ಸತ್ಯಾಗ್ರಹಕ್ಕೆ ಕೈ ಜೋಡಿಸಿದ್ದರು.
ಕೆಂದ್ರ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿಯಾ ರಂಜನ್ ನೇತೃತ್ವದ ಉನ್ನತ ಮಟ್ಟದ ಕೇಂದ್ರ ನಿಯೋಗವು ರೈತ ಮುಖಂಡ ದಲ್ಲೆವಾಲ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಪ್ರತಿನಿಧಿಗಳನ್ನು ಭೇಟಿ ಮಾಡಿ ಫೆ.14ರಂದು ಮಾತುಕತೆಗೆ ಆಹ್ವಾನಿಸಿದ ನಂತರ ದಲ್ಲೆವಾಲ್ ಉಪವಾಸ ಅಂತ್ಯಗೊಳಿಸಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಒಪ್ಪಿಗೆ ನೀಡಿದರು.
ಉಪ ಪೊಲೀಸ್ ಮಹಾನಿರೀಕ್ಷಕ ಮನ್ದೀಪ್ ಸಿಂಗ್ ಸಿಧು ಮತ್ತು ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾಸಿಕ್ ಸಿಂಗ್ ಅವರ ಸಮ್ಮುಖದಲ್ಲಿ 121 ರೈತರು ಜ್ಯೂಸ್ ಕುಡಿಯುವ ಮೂಲಕ ಉಪವಾಸ ಕೊನೆಗೊಳಿಸಿದರು.