ನವದೆಹಲಿ: ಜಾತಿ ರಾಜಕಾರಣದ ಹೆಸರಿನಲ್ಲಿ ಕೆಲವರು ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ
ಇಂದು ದೆಹಲಿಯಲ್ಲಿ ಗ್ರಾಮೀಣ ಭಾರತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 2047ರ ವೇಳೆಗೆ ವಿಕಸಿತ ಭಾರತ ಕನಸನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ಗ್ರಾಮಗಳೇ ಪ್ರಮುಖ ಪಾತ್ರ ವಹಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು, ದೇಶದಲ್ಲಿ ಜಾತಿ ರಾಜಕಾರಣದ ವಿಷವನ್ನು ಹರಡುವ ಮೂಲಕ ಕೆಲವರು ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಗ್ರಾಮಗಳಲ್ಲಿ ಶಾಂತಿ ಸೌಹಾರ್ದತೆಯ ಪರಂಪರೆಯನ್ನು ಬಲಪಡಿಸುವ ಕೆಲಸ ಮಾಡಬೇಕಿದೆ. ದೇಶದ ಗ್ರಾಮೀಣ ಭಾಗಗಳಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಲು ಇಂತಹ ಕೃತ್ಯಗಳನ್ನು ವಿಫಲಗೊಳಿಸುವಂತೆ ಕರೆ ನೀಡಿದರು.
ಕಳೆದ 2014ರಿಂದ ನಮ್ಮ ಸರ್ಕಾರವು ಗ್ರಾಮೀಣಾಭಿವೃದ್ಧಿಗಾಗಿ ಹಲವು ಕ್ರಮ ಕೈಗೊಂಡಿದೆ. ಈ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ. ಗ್ರಾಮೀಣ ಭಾರತದಲ್ಲಿ ಬಡತನವು 2012ರಲ್ಲಿ ಶೇಕಡಾ 26ರಿಂದ ಈಗ ಶೇಕಡಾ 5ಕ್ಕಿಂತ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.
ಮೂಲಭೂತ ಅವಶ್ಯಕತೆಗಳಿಂದ ವಂಚಿತವಾಗಿರುವ ಗ್ರಾಮಗಳನ್ನು ಬಿಟ್ಟುಹೋದ ಹಿಂದಿನ ಸರ್ಕಾರಕ್ಕಿಂತ ಭಿನ್ನವಾಗಿ ಇಂದಿನ ನಮ್ಮ ಸರ್ಕಾರವು ಈಗ ಹಳ್ಳಿಗಳನ್ನು ಸಬಲೀಕರಣಗೊಳಿಸಲು ಮತ್ತು ಆರಂಭದಲ್ಲಿ ಕಡೆಗಣಿಸಲ್ಟಟ್ಟವರ ಅಗತ್ಯಗಳನ್ನು ಪರಿಹರಿಸಲು ಗಮನಹರಿಸಿದೆ ಎಂದು ಹೇಳಿದರು.





