Mysore
20
overcast clouds
Light
Dark

ದೇಶಾದ್ಯಂತ ಎಚ್‌ಎಂಟಿ ಭೂಮಿ ಒತ್ತುವರಿ ತೆರವಿಗೆ ಕ್ರಮ: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

ಹೈದರಾಬಾದ್: ತೀವ್ರ ಸಂಕಷ್ಟದ ಸ್ಥಿತಿಯಲ್ಲಿರುವ ಇಲ್ಲಿನ ಎಚ್‌ಎಂಟಿ- ಮಶೀನ್ & ಟೂಲ್ಸ್ (HMT MTL) ಘಟಕವೂ ಸೇರಿದಂತೆ ನಗರದಲ್ಲಿರುವ ಕಂಪನಿ ವ್ಯಾಪ್ತಿಯ ಎಲ್ಲಾ ಭೂಮಿಯ ರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಕಾರ್ಖಾನೆಗೆ ಭೇಟಿ ನೀಡಿದ ನಂತರ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಜತೆ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ನಾನು ಭಾರೀ ಕೈಗಾರಿಕೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಎಚ್‌ಎಂಟಿ ಬಗ್ಗೆಯೇ ಸರಣಿ ಸಭೆಗಳನ್ನು ನಡೆಸಿದ್ದೇನೆ. ಕರ್ನಾಟಕದ ಬೆಂಗಳೂರು, ಹರಿಯಾಣದ ಪಿಂಜೋರ್ ನಲ್ಲಿರುವ ಘಟಕಗಳಿಗೆ ಭೇಟಿ ನೀಡಿದ್ದೇನೆ. ದೇಶದ ಎಲ್ಲಾ ಕಡೆಯಲ್ಲೂ ಎಚ್‌ಎಂಟಿ ಘಟಕಗಳು ಒಂದೇ ರೀತಿಯ ಸಂಕಷ್ಟ ಎದುರಿಸುತ್ತಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಅನೇಕ ಕಡೆ ಕಂಪನಿಗೆ ದೊಡ್ಡ ಪ್ರಮಾಣದಲ್ಲಿ ಭೂಮಿ ಇದೆ. ಕೆಲವಡೆ ಅಕ್ರಮ ಒತ್ತುವರಿ ಆಗಿದೆ. ಕಾನೂನು ಕ್ರಮದ ಮೂಲಕ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.

ಹೈದರಾಬಾದ್ ನಲ್ಲಿರುವ ಹೈದಾರಾಬಾದ್ ನಲ್ಲಿರುವ ಎಚ್‌ಎಂಟಿ- ಮಶೀನ್ & ಟೂಲ್ಸ್ (HMT MTL) ಘಟಕ ಕೆಲ ವರ್ಷಗಳ ಹಿಂದೆ ಉತ್ತಮ ಸ್ಥಿತಿಯಲ್ಲಿತ್ತು. ಇಸ್ರೋ, ಸೇನೆ ಸೇರಿದಂತೆ ವಿವಿಧ ವಲಯಗಳ ಬೇಡಿಕೆಗಳಿಗೆ ತಕ್ಕಂತೆ ವಿಸ್ತೃತವಾಗಿ ಉತ್ಪಾದನೆ ಮಾಡುತ್ತಿತ್ತು. ಹಲವು ಕಾರಣಗಳಿಂದಾಗಿ ಅದು ಸಂಕಷ್ಟಕ್ಕೆ ಸಿಲುಕಿದೆ. ಅದಕ್ಕೆ ಮರುಜನ್ಮ ನೀಡುವ ಬಗ್ಗೆ ಮುಕ್ತವಾಗಿ ಚಿಂತನೆ ನಡೆಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ ಕಲ್ಪನೆಯ ಅಡಿಯಲ್ಲಿ ಮಾರ್ಗೋಪಾಯ ಹುಡುಕಲಾಗುವುದು ಎಂದು ಅವರು ಹೇಳಿದರು.

ಇಡೀ ಕಾರ್ಖಾನೆಯನ್ನು ವೀಕ್ಷಿಸಿದ ಕೇಂದ್ರ ಸಚಿವರು ಈ ಸಂದರ್ಭದಲ್ಲಿ ಹಾಲಿ, ನಿವೃತ್ತ ಕಾರ್ಮಿಕರ ಜತೆ ಸಂವಾದ ನಡೆಸಿದರು. ಬಳಿಕ ಆಡಳಿತ ಮಂಡಳಿಯ ಸಭೆ ನಡೆಸಿದರು.

ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮ, ಕಂಪನಿಯ ಅಧ್ಯಕ್ಷ – ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಘಟಕದ ಮುಖ್ಯಸ್ಥ ರಾಜಬಾಬು ಸೇರಿ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.