ಮೈಸೂರು : ಕರ್ನಾಟಕ ರತ್ನ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 16 ನೇ ವರ್ಷದ ಸ್ಮರಣೆಯನ್ನು ನಗರದ ವಿವಿಧೆಡೆ ವಿಷ್ಣುವರ್ಧನ್ ಅಭಿಮಾನಿಗಳು ಆಚರಿಸಿದರು.
ಡಾ.ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ವತಿಯಿಂದ ಅರಮನೆಯ ಮುಂಭಾಗದ ಡಾ.ವಿಷ್ಣುವರ್ಧನ್ ಉದ್ಯಾನವನದಲ್ಲಿ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೇರು ನಟನನ್ನು ಸ್ಮರಿಸಲಾಯಿತು.
ಈ ವೇಳೆ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಪಾರ್ಥ ಸಾರಥಿ ಮಾತನಾಡಿ, ಅರಮನೆ ಮುಂಭಾಗದ ಡಾ.ವಿಷ್ಣುವರ್ಧನ್ ಉದ್ಯಾನವನ್ನು ರಾಜ್ಯ ಸರ್ಕಾರ ಮತ್ತು ನಗರಪಾಲಿಕೆ ಅಧಿಕೃತವಾಗಿ ಘೋಷಿಸಿ ಅಭಿವೃದ್ಧಿ ಮಾಡಬೇಕು. ಉದ್ಯಾನವನದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆ ಸ್ಥಾಪಿಸಬೇಕು. ಲಕ್ಷಾಂತರ ಮಂದಿ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ. ವಿಷ್ಣುವರ್ಧನ್ ವಿಶ್ವವಿಖ್ಯಾತರಾಗಿರುವ ಕಾರಣ ಉದ್ಯಾನವನಕ್ಕೆ ಭೇಟಿ ಕೊಡುತ್ತಾರೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಪ್ರವಾಸೋದ್ಯಮಕ್ಕೆ ಸಹಕಾರಿಯಾಗಿ ನೂರಾರು ಮಂದಿಗೆ ಕೆಲಸ ಸಿಗುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸತೀಶ್, ಆಲ್ವಿನ್, ಮಹದೇವ್, ಬಸವರಾಜು, ಲಕ್ಷ್ಮಣ, ಕುಮಾರ, ರಮೇಶ್ ಇನ್ನಿತರರು ಹಾಜರಿದ್ದರು.
ಜನ ಮಾನಸದಲ್ಲಿ ಅಚ್ಚಹಸಿರು:
ನಗರದ ದೇವರಾಜ ಅರಸು ರಸ್ತೆಯಲ್ಲಿ ಅಲಯನ್ಸ್ ಕ್ಲಬ್ ಅಫ್ ಮೈಸೂರು ನಾಲ್ವಡಿ ವತಿಯಿಂದ ಡಾ.ವಿಷ್ಣುವರ್ಧನ್ 16ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲಿಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಸಾಹಸಸಿಂಹ, ಕನ್ನಡಿಗರ ಕಣ್ಮಣಿ ಡಾ.ವಿಷ್ಣುವರ್ಧನ್ ಮಾನವೀಯ ಮೌಲ್ಯಗಳ ಹರಿಕಾರರಾಗಿ, ಉತ್ತಮ ನಟನೆಯ ಮೂಲಕ ಜನ ಮಾನಸದಲ್ಲಿ ಇನ್ನು ಅಚ್ಚ ಹಸಿರಾಗಿದ್ದಾರೆ. ಕನ್ನಡ ಚಿತ್ರರಂಗದ ದಂತಕಥೆಯಾಗಿದ್ದಾರೆ ಎಂದರು.
ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು, ಅಲಯನ್ಸ್ ಕ್ಲಬ್ ಅಫ್ ಮೈಸೂರು ನಾಲ್ವಡಿ ಬೆಟ್ಟೇಗೌಡ, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ, ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಜು, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಸಂದೇಶ್ ಪವಾರ್, ವಸಂತ ಮನೀಶ್, ಮೋಹಿತ್ ಗೌಡ, ಉಮೇಶ್, ಯಶವಂತ್, ವಿನೋದ್ ಅರಸ್, ಪ್ರಕಾಶ್, ಶ್ರೀನಿವಾಸ್, ಗೋಪಾಲ್ ಇದ್ದರು.
ಮೈಸೂರಿನ ಹೊರಹೊಲಯದಲ್ಲಿರುವ ವಿಷ್ಣು ಸ್ಮಾರಕದಲ್ಲೂ ವಿಶೇಷ ಪೂಜೆ ಮಾಡಿ ಸ್ಮರಿಸಲಾಯಿತು. ಇನ್ನೂ ನಗರದದ್ಯಾಂತ ವಿಶೇಷ ಪೂಜೆ, ರಕ್ತದಾನ ಮತ್ತು ಅನ್ನದಾನ ಶಿಬಿರಗಳು ನಡೆದವು.





