ಮೈಸೂರು: ನಮ್ಮ ನಮ್ಮ ಊರುಗಳ ಇತಿಹಾಸ ತಿಳಿದುಕೊಳ್ಳದೆ ಹೆಸರು ಬದಲಿಸುವುದು ಒಳ್ಳೆಯದಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಟಿ.ಎಸ್.ಶ್ರೀವತ್ಸ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದಿಂದ ತುಮಕೂರು ಜಿಲ್ಲೆಯ ಹೆಸರು ಬದಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ನಮ್ಮ ಊರುಗಳ ಇತಿಹಾಸ ತಿಳಿದುಕೊಳ್ಳದೇ ಹೆಸರು ಬದಲಿಸೋದು ಒಳ್ಳೆಯದಲ್ಲ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ ಕಾರಣ ಇನ್ನೂ ತಿಳಿದಿಲ್ಲ. ನಾಳೆ ಮಂಡ್ಯ-ಮೈಸೂರು ಜಿಲ್ಲೆಗಳ ಹೆಸರನ್ನು ಬದಲಿಸಬಹುದು. ತುಮಕೂರಿನ ಸಿದ್ದಗಂಗಾ ಶ್ರೀಗಳನ್ನು ನಡೆದಾಡುವ ದೇವರು ಎನ್ನುತ್ತಾರೆ. ಅಂತಹ ಪುಣ್ಯಸ್ಥಳ ಇರುವ ಜಿಲ್ಲೆಯ ಹೆಸರನ್ನು ಬದಲಿಸೋದು ಒಳ್ಳೆಯದಲ್ಲ. ಹೆಸರು ಬದಲಿಸುವ ವಿಚಾರದಲ್ಲಿ ತುಮಕೂರು ಜನತೆ ಹೊರಟ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಈ ಹಿಂದೆ ರಾಮನಗರದಲ್ಲಿ ಚರ್ಚ್ ನಿರ್ಮಿಸಬೇಕೆಂದು ಡಿಸಿಎಂ ಡಿಕೆಶಿ ಹೊರಟಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಸರ್ಕಾರ ಜನರ ಅಭಿಪ್ರಾಯ ಸಂಗ್ರಹಿಸದೇ ಬರೀ ಯಡವಟ್ಟು ಮಾಡುತ್ತಿದೆ. ಈ ಮೂಲಕ ಸರ್ಕಾರ ತುಘಲಕ್ ಮಾದರಿಯಲ್ಲಿ ಅಧಿಕಾರ ನಡೆಸಲು ಹೊರಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.





