ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಕಳ್ಳನನ್ನು ಹಿಡಿಯಲು ಹೋದ ಜನರಿಗೆ ಚಾಕು ತೋರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಖದೀಮರು ಹಳ್ಳಿ ಜನರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.
ಆಸ್ಪತ್ರೆ ಆವರಣದಲ್ಲಿ ಪ್ರತಿ ದಿನವೂ ಕಳ್ಳತನ ನಡೆಯುತ್ತಿದ್ದು, ಖದೀಮರು ರೋಗಿಯ ಸಂಬಂಧಿಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.
ಆಸ್ಪತ್ರೆ ಹೊರಗಡೆ ಮಲಗಿರುವಾಗ ಮೊಬೈಲ್, ಹಣ ಕಳ್ಳತನವಾಗುತ್ತಿದ್ದು, ನಿನ್ನೆ ಮಲಗಿದ್ದ ವ್ಯಕ್ತಿಯ ಬಳಿ ಇದ್ದ 9 ಸಾವಿರ ಹಣ ಹಾಗೂ ಒಂದು ಮೊಬೈಲ್ ಕಳುವಾಗಿದೆ.
ಎರಡು ದಿನದ ಹಿಂದೆ ಕಳ್ಳನೋರ್ವ ಹಣ ಎಗರಿಸಿ ಹೋಗುವಾಗ ವ್ಯಕ್ತಿಯು ಕೂಗಿಕೊಂಡಿದ್ದಾನೆ. ಈ ವೇಳೆ ಕಳ್ಳನನ್ನು ಹಿಡಿಯಲು ಹೋದ ಅಕ್ಕಪಕ್ಕದಲ್ಲಿದ್ದವರಿಗೆ ದೊಡ್ಡದಾದ ಚಾಕು ತೋರಿಸಿ ಕಳ್ಳ ಪರಾರಿಯಾಗಿದ್ದಾನೆ. ಈ ವೇಳೆ ಚಾಕು ಕಂಡು ಭಯಗೊಂಡ ಜನರು ವಾಪಸ್ ಆಸ್ಪತ್ರೆ ಬಳಿ ಓಡಿ ಬಂದಿದ್ದಾರೆ.
ಸೆಕ್ಯೂರಿಟಿ ಇಲ್ಲದ ಚಲುವಾಂಬ ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿಕರಿಗೆ ಕಳ್ಳರ ಕಾಟ ಹೆಚ್ಚಾಗಿದೆ. ಎಲ್ಲಿ ದೂರು ಕೊಡಬೇಕೋ ಗೊತ್ತಿಲ್ಲ, ಅದಕ್ಕಾಗಿ ದೂರು ನೀಡಲ್ಲ. ರಾತ್ರಿ 10 ಗಂಟೆ ಸಮಯದಲ್ಲಿ ಪೊಲೀಸರು ಬೀಟ್ಸ್ ಹಾಕಿ ಮತ್ತೆ ಬರುವುದಿಲ್ಲ. ಕಳ್ಳರಿಗೆ ಪೊಲೀಸರ ಭಯವಿಲ್ಲ. ಅದಕ್ಕಾಗಿ ರಾತ್ರಿ ವೇಳೆ ಹಳ್ಳಿ ಜನರ ಮೇಲೆ ಕಳ್ಳರ ಕೈಚಳಕ ಹೆಚ್ಚಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




