ಮೈಸೂರು: ಬಸವಭವನ ನಿರ್ಮಾಣ ಮಾಡಲು ಐದು ಕೋಟಿ ಕೊಡುವುದಾಗಿ ಈ ಹಿಂದೆ ಒಪ್ಪಿಕೊಂಡಿದೆ. ಆ ಐದು ಕೋಟಿ ಹಣವನ್ನು ಸದ್ಯದಲ್ಲೇ ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ನಡೆದ ಬಸವಜಯಂತಿ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮೊದಲಿಗೆ ರಾಜ್ಯದ ಎಲ್ಲ ಜನರಿಗೆ ಬಸವಜಯಂತಿ ಶುಭಾಶಯಗಳನ್ನು ತಿಳಿಸಿದರು. ಬಸವಣ್ಣನವರು ಕನಸಾಗಿದ್ದ ಸಮಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು. ಸಾಮಾಜಿಕ ಅವ್ಯವಸ್ಥೆ, ಜಾತಿವ್ಯವಸ್ಥೆ, ಮೂಢನಂಬಿಕೆ ವಿರುದ್ಧ ಬಸವಣ್ಣನವರು ಹೋರಾಡಿದರು. ಬಸವಣ್ಣ ತಳ ಸಮುದಾಯದಿಂದ ಬಂದವರಲ್ಲ. ಬಸವಣ್ಣ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದವರು. ಆದರೂ ನಾನು ಅಸ್ಪೃಶ್ಯ ಸಮಾಜದಲ್ಲಿ ಹುಟ್ಟಿದ್ದೇನೆ ಎಂದು ಬಸವಣ್ಣ ಹೇಳಿದ್ದನ್ನು ಪ್ರತಿಯೊಬ್ಬರೂ ಸ್ಮರಿಸಬೇಕು.
ಕರ್ಮ ಸಿದ್ದಾಂತವನ್ನು ಬಸವಣ್ಣ ತಿರಸ್ಕರಿಸಿದ್ದರು. ಹಿಂದಿನ ಜನ್ಮದಲ್ಲಿ ಕರ್ಮ ಮಾಡಿದ್ದೆ ಎಂಬುದೆಲ್ಲ ಸುಳ್ಳು. ಇದನ್ನು ಪಟ್ಟಭದ್ರ ಹಿತಾಸಕ್ತಿಗಳು ಹುಟ್ಟುಹಾಕಿದ್ದು ಎಂಬ ಸತ್ಯವನ್ನು ಬಸವಾದಿ ಶರಣರು ಮನವರಿಕೆ ಮಾಡಿಕೊಟ್ಟರು. ಎಲ್ಲರಿಗೂ ಕಲಿಯುವ ಅವಕಾಶ ಸಿಕ್ಕಿದ್ದರೆ ಅಸಮಾನತೆಯ ಸಮಾಜ ನಿರ್ಮಾಣ ಆಗುತ್ತಿರಲಿಲ್ಲ. ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಮತ್ತೊಂದು ಧರ್ಮವನ್ನು ಬಸವಣ್ಣ ಹುಟ್ಟುಹಾಕಿದರು. ಸಮಾನತೆಯ ಸಮಾಜವನ್ನು ಬಸವಾದಿ ಶರಣರು ಹುಟ್ಟು ಹಾಕಿದರು. ಸಮಾಜದ ಬದಲಾವಣೆಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಆದರೆ ಇಂದಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರೂರಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಎಲ್ಲರಿಗೂ ದೊರಕಿದಾಗ ಜಾತಿ ವ್ಯವಸ್ಥೆ ನಿರ್ಮೂಲವಾಗಲಿದೆ. ಇವ ನಮ್ಮವ ಎನ್ನುವ ಜಾತಿ ವ್ಯವಸ್ಥೆ ನಮ್ಮಲ್ಲಿ ಇನ್ನೂ ಬಂದಿಲ್ಲ. ಹಾಗಾಗಿ ಬಸವಣ್ಣನ ತತ್ವಗಳು ಇಂದಿಗೂ ಬೇಕು, ಮುಂದಕ್ಕೂ ಬೇಕಾಗುತ್ತವೆ. ಉತ್ಪಾದನೆ ಹಂಚಿಕೆ ಸಮರ್ಪಕವಾಗಿ ಆಗಬೇಕು ಎಂಬುದನ್ನು ಬಸವಾದಿ ಶರಣರು ಕೊಟ್ಟ ಕೊಡುಗೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.




