ವಿವಿಧ ಕ್ಷೇತ್ರದ ಸಾಧಕರಿಗೆ ಡಾ ಪುನೀತ್ ರಾಜರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ
ಮೈಸೂರು: ಮಲೆ ಮಾದೇಶ್ವರ ಸೇವಾ ಸಂಸ್ಥೆ ವತಿಯಿಂದ ವಿಜಯನಗರದ ಖಾಸಗಿ ಹೋಟೆಲ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮೂರನೇ ವರ್ಷದ ಪುಣ್ಯ ಸ್ಮರಣೆ ದಿನದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಡಾ. ಪುನೀತ್ ರಾಜರತ್ನ ಪ್ರಶಸ್ತಿ ಪ್ರಧಾನ ನೀಡಿ ಗೌರವಿಸಲಾಯಿತು.
ಸಂಗೀತ ಹಾಗೂ ವೈದ್ಯಕೀಯ ಕ್ಷೇತ್ರದಿಂದ ಡಾ.ರೇಖಾ ಮನಃಶಾಂತಿ, ನಿರೂಪಣೆ ಕ್ಷೇತ್ರ ಮಂಜು ಸಿ ಶಂಕರ್, ಸಹಕಾರಿ ಕ್ಷೇತ್ರ ರಿಷಿ ವಿಶ್ವಕರ್ಮ, ಸಂಘಟನಾ ಕ್ಷೇತ್ರ ರೂಪ ಎಚ್ ಗೌಡ, ಕ್ರೀಡಾ ಕ್ಷೇತ್ರ ಅಲೋಕ್ ಆರ್ ಜೈನ್, ಚಿತ್ರರಂಗ ಕ್ಷೇತ್ರ ಸ್ಮಿತಾ ಬಿ, ಸಂಘಟನಾ ಕ್ಷೇತ್ರ ಕಾಡನಹಳ್ಳಿ ಡಿ. ಸ್ವಾಮಿಗೌಡ ಅವರಿಗೆ ಡಾ. ಪುನೀತ್ ರಾಜರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಬಳಿಕ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಜನನವಾದ ಮೇಲೆ ಮರಣ ನಿಶ್ಚಿತ. ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತ ವಾಗಿರುವಂತೆ ಬದುಕಬೇಕು. ಅಂಥ ಬದುಕು ಪುನೀತ್ ರಾಜ್ಕುಮಾರ್ ಅವರದ್ದಾಗಿದೆ ಎಂದು ಹೇಳಿದರು.
ಶ್ರೀಮಂತಿಕೆ, ಜೀವಿತಾವಧಿ ಮುಖ್ಯವಲ್ಲ. ಹೇಗೆ ಬದುಕಿದ್ದರು ಎಂಬುದೇ ಮುಖ್ಯ. ಸಂತ ಕಬೀರರು ಹೇಳಿದಂತೆ ನಾವು ಮರಣಿಸಿದಾಗ ಜನರಿಗೆ ದುಃಖವಾದರೆ ಅದು ಸಾರ್ಥಕ ಬದುಕಾಗುತ್ತದೆ. ಕೇವಲ 46 ವರ್ಷ ಬದುಕಿದರೂ ಪುನೀತ್ ಸಾವಿರಾರು ಜನರಿಗೆ ಆಸರೆಯಾಗಿದ್ದರು. ಅನೇಕ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಧನ ಸಹಾಯ ಮಾಡಿದ್ದರು. ಪ್ರಚಾರ ಬಯಸದೇ ಕರ್ಣನ ರೀತಿಯಲ್ಲಿ ಕೊಡುಗೈ ದಾನಿಯಾಗಿದ್ದರು. ಸಂಬಂಧ ವಿಲ್ಲದವರು ಕೂಡ ಅವರ ಸಾವಿಗೆ ದುಃಖಪಟ್ಟಿದ್ದಾರೆ. ಶಾರೀರಿಕವಾಗಿ ನಮ್ಮನ್ನಗಲಿದರೂ ಅವರಿಗೆ ಸಾವಿಲ್ಲ, ಅವರು ಅಜರಾಮರ’ ಎಂದು ಹೇಳಿದರು,
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್ ಮಾತನಾಡಿ,‘ಪುನೀತ್ ರಾಜಕುಮಾರ್ ಅದ್ಭುತ ನಟ. ಬಾಲ್ಯದಿಂದಲೇ ನಟನೆಯಲ್ಲಿ ತೊಡಗಿಕೊಂಡಿದ್ದ ಅವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅಂತಹ ಅಭಿಮಾನದ ವಿದಾಯ ಎಲ್ಲರಿಗೂ ಸಿಗುವುದಿಲ್ಲ’ ಎಂದು ಹೇಳಿದರು.
ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ ಬಿ ಲಿಂಗರಾಜು, ಹಿರಿಯ ಸಮಾಜ ಸೇವಕ ಕೆ ರಘುರಾಮ ವಾಜಪೇಯಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಮಾಜ ಸೇವಕರಾದ ನಜರ್ಬಾದ್ ನಟರಾಜ್, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷರಾದ ಜಿ ರಾಘವೇಂದ್ರ, ಮಲೆ ಮಾದೇಶ್ವರ ಸೇವಾ ಸಂಸ್ಥೆ ಸಂಸ್ಥೆಯ ಅಧ್ಯಕ್ಷ ಮಹಾನ್ ಶ್ರೇಯಸ್, ರಾಕೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.





