ಮೈಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್ ಚಿಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ಇಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು.
ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಶಕ್ತಿ ದೇವತೆಯ ದರ್ಶನ ಪಡೆದು ಸಚಿವ ಭೈರತಿ ಸುರೇಶ್ ಅವರು, ಎಲ್ಲರಿಗೂ ಒಳಿತಾಗುವಂತೆ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಚಿವರಿಗೆ ಸಾಥ್ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಎರಡು ಉದ್ದೇಶದಿಂದ ಬಂದಿದ್ದೇನೆ. ಮಗನ ಮದುವೆ ಬಳಿಕ ಕುಟುಂಬ ದರ್ಶನಕ್ಕೆ ಬರಬೇಕಿತ್ತು ಬಂದಿದ್ದೇವೆ. ನಂತರ ಮೈಸೂರು ಪಾಲಿಕೆ ವ್ಯಾಪ್ತಿಯ ಅಭಿವೃದ್ದಿ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಸಿಎಂ ಮೈಸೂರು ಅಭಿವೃದ್ಧಿ ಬಗ್ಗೆ ಕೆಲವು ಸೂಚನೆ ನೀಡಿದ್ದಾರೆ. ವಿವಿಧ ಕಾಮಗಾರಿ ಅಭಿವೃದ್ಧಿಗೆ 750 ಕೋಟಿ ಡಿಪಿಆರ್ ಕೆಲಸವಾಗಿದೆ. ಮೈಸೂರಿನ ಎರಡು ಕೆರೆ, ದೇವರಾಜ ಮಾರುಕಟ್ಟೆ, ಲಾನ್ಸ್ ಡೌನ್ ಬಿಲ್ಡಿಂಗ್ ವೈಟ್ ಟಾಪಿಂಗ್, ರಿಂಗ್ ರಸ್ತೆ, ಯುಜಿಡಿ ಕೆಲಸ ಮಾಡಬೇಕಿತ್ತು. ಈ ಬಗ್ಗೆ ಪಾಲಿಕೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ಬೆಂಗಳೂರು ಮಾದರಿ ವೈಟ್ ಟಾಪಿಂಗ್ ಕೆಲಸ ಮಾಡಬೇಕಿದೆ ಎಂದರು.





