ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಜಿಲ್ಲಾ ನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮೈಸೂರು ನಗರದ ಗಾಂಧಿ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಎಂಎಲ್ಸಿ ವಿವೇಕಾನಂದ ಅವರು, ನಾಲ್ವಡಿಯವರ ಕಾಲಿನ ಧೂಳಿಗೂ ಯತೀಂದ್ರ ಸಿದ್ದರಾಮಯ್ಯ ಸಮಾನರಲ್ಲ. ಮಹಾರಾಜರು ಕೊಟ್ಟಿರುವ ಕೊಡುಗೆಗಳು ನಮ್ಮ ಕಣ್ಮುಂದೆ ಇವೆ. ಸಿದ್ದರಾಮಯ್ಯ ಅವರ ಕೊಡುಗೆ ಮೈಸೂರಿಗೆ ಶೂನ್ಯ. ಹಿಂಭಾಗಿಲಿನಿಂದ ಬಂದು ಕಾಂಗ್ರೆಸ್ಗೆ ಸೇರಿಕೊಂಡು ಸಿದ್ದರಾಮಯ್ಯ ಸಿಎಂ ಆಗಿದ್ದಾರೆ.
ಅಹಿಂದ ಅಹಿಂದ ಎಂದುಕೊಂಡು ಕೇವಲ ಹತ್ತು ಸೀಟು ಗೆದ್ದು ಬನ್ನಿ. ಅಂದಿಗೆ ನಾನು ರಾಜಕೀಯ ಜೀವನದಿಂದ ರಾಜೀನಾಮೆ ಕೊಡುತ್ತೇನೆ. ನಿಮ್ಮ ಮನೆಯಲ್ಲಿ ಹತ್ತು ವರ್ಷ ಕೆಲಸ ಮಾಡುತ್ತೇನೆ ಎಂದು ಸವಾಲು ಹಾಕಿದರು. ಕೂಡಲೇ ಯತೀಂದ್ರ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಯತೀಂದ್ರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.





