ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾ.ರಾ. ಮಹೇಶ್ ‘ಸತ್ಯ ಮೇವ ಜಯತೇ’ ಎಂದು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾರಣಿಗಳು ಹಾಗೂ ಅಧಿಕಾರಿಗಳಲ್ಲಿ ಎಲ್ಲರೂ ಒಳ್ಳೆಯವರು ಅಲ್ಲ, ಎಲ್ಲರೂ ಭ್ರಷ್ಟಾಚಾರಿಗಳು, ಅಪ್ರಾಮಾಣಿಕರಲ್ಲ. ಒಳ್ಳೆಯವರು-ಕೆಟ್ಟವರು ಇದ್ದೆ ಇರುತ್ತಾರೆ ಎಂದರು.
ಕೊಲ್ಲಲು ಹತ್ತು ಜನರು ಇದ್ದರೆ, ಕಾಯಲು ಒಬ್ಬರು ಇರುತ್ತಾರೆ. ಗ್ರೂಪ್ ಡಿ ನೌಕರನಿಂದ ಮುಖ್ಯ ಕಾರ್ಯದರ್ಶಿ ತನಕ ಅಧಿಕಾರಿಗಳು ಸರ್ಕಾರದ ಸೇವಕರು. ಗ್ರಾಪಂ ಸದಸ್ಯನಿಂದ ಮುಖ್ಯಮಂತ್ರಿ, ಪ್ರಧಾನಮಂತ್ರಿವರೆಗೆ ಸಾರ್ವಜನಿಕರ ಸೇವಕರು ಆಗಿರುತ್ತಾರೆ. ಅವರವರ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದರು.
ರೋಹಿಣಿ ಸಿಂಧೂರಿ ಅವರ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪಿನ ಪೂರ್ಣಭಾಗವನ್ನು ಓದಿಲ್ಲ. ಕೆಲವನ್ನು ನೋಡಿದ್ದೇನೆ. ಕೆಲವು ಅಂಶಗಳನ್ನು ನ್ಯಾಯಾಧೀಶರು ಹೇಳಿದ್ದಾರೆ. ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇನೆ. ಶನಿವಾರ ಅಥವಾ ಭಾನುವಾರ ದಾಖಲೆಗಳೊಂದಿಗೆ ಮಹತ್ವದ ವಿಚಾರ ಹಂಚಿಕೊಳ್ಳುತ್ತೇನೆ ಎಂದರು.
ಸಾಲಿಗ್ರಾಮದ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿರುವುದನ್ನು ನೋಡಿದರೆ ಅಧಿಕಾರಿಗಳ ಮೇಲೆ ಕಂಟ್ರೋಲ್ ಇಲ್ಲ ಎಂಬುದು ಗೊತ್ತಾಗುತ್ತದೆ. ಇದು ಸದನದಲ್ಲಿ ಮಾತನಾಡುವ ಅಂಶವೇ ಎಂದು ಟೀಕಿಸಿದರು. ಎಸ್.ಡಿ.ರವಿಶಂಕರ್ ಅವರು ಜಿಪಂ ಸದಸ್ಯರಂತೆ ವರ್ತಿಸದೇ, ಶಾಸಕರಂತೆ ವರ್ತಿಸಲಿ. ತಾಲ್ಲೂಕಿನ ಅಧಿಕಾರಿಗಳನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಸಾಲಿಗ್ರಾಮ ಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಬಂಧದ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡುವುದಲ್ಲ, ಯಾವುದನ್ನು ಎಲ್ಲಿ ಚರ್ಚೆ ಮಾಡಬೇಕು ಎಂಬುವುದನ್ನು ಅವರು ತಿಳಿದುಕೊಳ್ಳಬೇಕು ಎಂದು ಸಾ.ರಾ.ಮಹೇಶ್ ಹೇಳಿದರು.
ಕೆ.ಆರ್.ಪೇಟೆಯಿಂದ ಅರಕಲಗೂಡು ಮಾರ್ಗವಾಗಿ ನಡೆಯುವ ರಸ್ತೆ ಅಭಿವೃದ್ಧಿ ಮುಖ್ಯ. ರಸ್ತೆ ತೆರವು ವಿಚಾರದಲ್ಲಿ ಸರ್ವೆಯರ್ ರಿಂದ ಅಳತೆ ಮಾಡಿಸಿದರೆ ಮಾಡಿಸಬಹುದು. ಖಾಸಗಿ ಭೂಮಿಯಾಗಿ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಮಾರ್ಕ್ ಮಾಡಬಹುದೆಂದು ಹೇಳಿದ್ದೆ. ಒಂದು ದಿನ ಪೊಲೀಸರನ್ನು ಕರೆದುಕೊಂಡು ಹೋಗಿ ಮರಗಳನ್ನು ಕಡಿದು ಹಾಕಿದ್ದರಿಂದ ಜಿಲ್ಲಾಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.
ಶನಿವಾರ ಮತ್ತಷ್ಟು ಮಾಹಿತಿ :
ಬಟ್ಟೆ ಬ್ಯಾಗ್ ಖರೀದಿ ಸಂಬಂಧ ನ್ಯಾಯಾಲಯ ನೀಡಿರುವ ಆದೇಶ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನ ಸಾಮಾನ್ಯರಿಗೆ ವಿಶ್ವಾಸ ಮೂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತಷ್ಟು ಮಾಹಿತಿಯನ್ನು ಶನಿವಾರ ಮಾಧ್ಯಮಗಳ ಮುಂದೆ ಪ್ರಸ್ತುತ ಪಡಿಸುವೆ ಎಂದರು.





