ಮೈಸೂರು: ಎಸೆನ್ಸ್ ಸೇವನೆಯಿಂದಲೇ ಮೂವರು ಕೈದಿಗಳು ಸಾವು ಎಂದು ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದು ಕೆ.ಆರ್.ಆಸ್ಪತ್ರೆಯ ವೈದ್ಯ ದಿನೇಶ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮೂವರು ಕೈದಿಗಳು ಜೈಲಿನಲ್ಲಿ ಬೇಕರಿ ಪದಾರ್ಥಗಳನ್ನು ತಯಾರು ಮಾಡುತ್ತಿದ್ದರು. ವಾಂತಿ ಭೇದಿ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಮೂವರು ಕೂಡ ಆಸ್ಪತ್ರೆಗೆ ನಡೆದುಕೊಂಡೇ ಬಂದರು. ಆರಂಭದಲ್ಲಿ ಎಸೆನ್ಸ್ ಸೇವನೆ ಬಗ್ಗೆ ಮಾಹಿತಿ ನೀಡಲಿಲ್ಲ. ಒಂದೇ ದಿನದಲ್ಲಿ ಅಂಗಾಂಗ ವೈಫಲ್ಯ ಆಗಲು ಶುರುವಾಯಿತು. ನಂತರದಲ್ಲಿ ಎಸೆನ್ಸ್ ಸೇವನೆ ಬಗ್ಗೆ ಮಾಹಿತಿ ನೀಡಿದರು. ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಾಗಲಿಲ್ಲ. ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದರು.
ಇನ್ನು ಮೂವರು ಮಾದಕ ವಸ್ತುಗಳ ಸೇವನೆ ಮಾಡಿದ್ದಾರಾ ಎಂಬ ಬಗ್ಗೆ ಪರೀಕ್ಷೆ ಮಾಡಲಾಗಿದೆ. ವರದಿ ಬಂದ ನಂತರವಷ್ಟೇ ಮೂವರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಮಾಹಿತಿ ನೀಡಿದರು.