ಮೈಸೂರು: ರಾಜ್ಯದಲ್ಲಿ ದ್ವಿಭಾಷಾ ಸೂತ್ರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾವು ದ್ವಿಭಾಷ ಸೂತ್ರ ಒಪ್ಪಿಕೊಳ್ಳುತ್ತೇವೆ ಎಂದು ಪುನರುಚ್ಚರಿಸಿದರು.
ರಾಜ್ಯದಿಂದ ತಮಿಳುನಾಡಿಗೆ ನೀರು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 2023-24ರಲ್ಲಿ ಟ್ರಿಬುನಲ್ ಆದೇಶದ ಪ್ರಕಾರ 177.15 ಟಿಎಂಸಿ ನೀರು ಬಿಡುತ್ತಿದ್ದೆವು. ಈ ಬಾರಿ ಹೆಚ್ಚುವರಿಯಾಗಿ 9 ಟಿಎಂಸಿ ನೀರು ಬಿಡಬೇಕಿತ್ತು. ಆದರೆ 22 ಟಿಎಂಸಿ ನೀರನ್ನು ಬಿಟ್ಟಿದ್ದೇವೆ. ಟ್ರಿಬುನಲ್ ನಿಯಮದ ಪ್ರಕಾರ ಪ್ರತಿ ವರ್ಷ ಜಾಸ್ತಿ ಕೊಟ್ಟಿದ್ದೇವೆ. ಆದರೆ ಒಂದೆರಡು ವರ್ಷಗಳು ಮಾತ್ರ ಕಡಿಮೆ ನೀರು ಕೊಟ್ಟಿದ್ದೇವೆ. 177.5 ಟಿಎಂಸಿ ನೀರು ಕೊಡಲು ನಮ್ಮಲ್ಲೇನು ತಕರಾರು ಇಲ್ಲ. ಆದರೂ ನಮ್ಮ ಕಡೆಯಿಂದ ಹೆಚ್ಚು ನೀರು ಬಿಡಲಾಗುತ್ತಿದೆ. ಸಂಕಷ್ಟದ ಸಮಯದಲ್ಲಿ ನೀರು ಹಂಚಿಕೆಯಾಗಬೇಕು. ಅದನ್ನು ಸರಿದೂಗಿಸಲು ಮೇಕೆದಾಟು ಯೋಜನೆ ಜಾರಿ ಮಾಡಬೇಕಿದ್ದು, ಹೆಚ್ಚುವರಿ ನೀರು ಸಂಗ್ರಹಿಸಲು ಮುಂದಾಗಬೇಕಿದೆ ಎಂದರು.
ಇನ್ನು ಹಾಸನ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವ ಸಮೂಹ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯುವ ಸಮುದಾಯದಲ್ಲಿ ಯಾವ ಕಾರಣಕ್ಕೆ ಹೃದಯಾಘಾತ ಉಂಟಾಗುತ್ತಿದೆ ಎಂದು ಕಾರಣ ಪತ್ತೆ ಹಚ್ಚಬೇಕು. ಬಳಿಕ ಅದಕ್ಕೆ ಪರಿಹಾರ ನೀಡಬೇಕಿದೆ. ಹೃದಯಾಘಾತ ಯಾವ ಕಾರಣಕ್ಕಾಗಿ ಉಂಟಾಗುತ್ತಿದೆ ಎಂದು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಪರಿಹಾರ ನೀಡಬೇಕಿದೆ ಎಂದರು.




