ಮೈಸೂರು: ಆರು ದಿನಗಳ ಕಾಲ ‘ಬಿಡುಗಡೆ’ ಆಶಯ ಹೊತ್ತು ನಡೆದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಭಾನುವಾರ ವರ್ಣರಂಜಿತ ತೆರೆ ಬಿದ್ದಿತು.
ಆರು ವೇದಿಕೆಗಳಲ್ಲಿ ನಿತ್ಯ ನಾನಾ ಭಾಷೆಯ ನಾಟಕಗಳು, ವೈವಿಧ್ಯಮಯ ಜನಪದ ಕಾರ್ಯಕ್ರಮ, ಚಲನಚಿತ್ರೋತ್ಸವ, ಕರಕುಶಲ ಹಾಗೂ ಪುಸ್ತಕ ಪ್ರದರ್ಶನ, ಛಾಾಯಾ ಚಿತ್ರಗಳ ಪ್ರದರ್ಶನ, ಬೀದಿ ನಾಟಕ ಪ್ರದರ್ಶನದ ಮೂಲಕ ಪ್ರೇಕ್ಷಕ ವರ್ಗಕ್ಕೆ ರಸದೌತಣ ಉಣಬಡಿಸಿತು.
ಪುಸ್ತಕ ಮೇಳ, ದೇಶಿ ತಿನಿಸು ಮೇಳ, ಕರಕುಶಲ ಮೇಳ ಹೀಗೆ ನಾನಾ ಕಾರ್ಯ ಕ್ರಮದ ಮೂಲಕ ಎಲ್ಲಾ ವರ್ಗದ ಜನರನ್ನು ಬೆಸೆಯಿತು. ವನರಂಗ, ಕಲಾಮಂದಿರ, ಕಿರುರಂಗಮಂದಿರ, ಭೂಮಿಗೀತಾ ಸಭಾಂಗಣದಲ್ಲಿ ಕನ್ನಡ, ಹಿಂದಿ, ಮಲೆಯಾಳಂ, ತಮಿಳು ಸೇರಿದಂತೆ ಇತರೆ ಭಾಷೆಗಳ ೨೨ ನಾಟಕಗಳು ಪ್ರದರ್ಶನಗೊಂಡವು.
ಬಹುರೂಪಿ ನಾಟಕೋತ್ಸವದ ಅಂತಿಮ ದಿನವಾದ ಭಾನುವಾರ ರಂಗಾಯಣದ ಅಂಗಳ ಕಾಲಿಡಲು ಸಾಧ್ಯವಾಗದ ರೀತಿಯಲ್ಲಿ ರಂಗಾಸಕ್ತರಿಂದ ಕಿಕ್ಕಿರಿದು ತುಂಬಿದ್ದರು. ಕೊನೆಯ ದಿನದ ಬಹುರೂಪಿಯಲ್ಲಿ ಕೇರಿ ಹಾಡು, ನಾಟಕವೇ ಪ್ರಧಾನ ಆಕರ್ಷಣೆಯಾಗಿತ್ತು. ಮಧ್ಯಾಹ್ನದವರೆಗೂ ರಂಗಾಯಣದ ಆವರಣ ಭಣಗುಟ್ಟುತ್ತಿತ್ತು. ಸಂಜೆಯಾಗುತ್ತಲೇ ತಂಡೋಪತಂಡವಾಗಿ ರಂಗಾಯಣದತ್ತ ಆಗಮಿಸಿದ ಸಾರ್ವಜನಿಕರು ನಾಟಕೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.
ಸಂಜೆ ನಡೆದ ಜಾನಪದೋತ್ಸವ ಮತ್ತು ನಾಟಕಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಿಂದರಿಜೋಗಿ ಆವರಣದಲ್ಲಿ ಉಡುಪು ನವೋದುಂ ಸಾಂಸ್ಕೃತಿಕ ಕಲಾ ಮೇಳದ ತಂಡವೂ ತುಳು ಸಾಂಸ್ಕೃತಿಕ ನೃತ್ಯ ನೋಡಲು ಹೆಚ್ಚಿನ ಜನರು ಸೇರಿದ್ದರು. ಇನ್ನು ಶಿವಮೊಗ್ಗದ ಶೋಭಾ ಮತ್ತು ತಂಡ ಪ್ರದರ್ಶಿಸಿದ ಲಂಬಾಣಿ ನತ್ಯ ನೋಡಿ ಮಾರುಹೋದರು. ಅಂತಿಮ ದಿನದಂದು ಪ್ರದರ್ಶನಗೊಂಡ ಕೆ.ಚಂದ್ರಶೇಖರ್ ನಿರ್ದೇಶನದ ಕೇರಿ ಹಾಡು, ಗಣೇಶ್ ಮಂದಾರ್ತಿ ನಿರ್ದೇಶನದ ಮೈ ಫ್ಯಾಮಿಲಿ, ಎಚ್.ಎಸ್.ಉಮೇಶ್ ನಿರ್ದೇಶನದ ಕನ್ನಡ ನಾಟಕಗಳು ಮತ್ತು ಬಹರುಲ್ ಇಸ್ಲಾಂ ನಿರ್ದೇಶನದಲ್ಲಿ ಅಸ್ಸಾಂನ ಸೀಗಲ್ ಥಿಯೇಟರ್ ಊಂಚಾಯಿ ಹಿಂದಿ ನಾಟಕ ಪ್ರದರ್ಶನಗೊಂಡಿತು. ಇದರಲ್ಲಿ ವನರಂಗದಲ್ಲಿ ನಡೆದ ಕೇರಿ ಹಾಡು ಮತ್ತು ಕಿರುರಂಗಮಂದಿರ ಹಾನ್ ಶಾಂತಿ ಕುಟೀರ ನಾಟಕ್ಕೆ ಜನ ಜಂಗುಳಿ ಕಂಡು ಬಂದಿತ್ತು. ಇತರರ ನಾಟಕಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.