ಮೈಸೂರು : ಉದ್ಯಮಿಯೊಬ್ಬ ಮೈಸೂರಿನ ತೆಂಗಿನಕಾಯಿ ಹೋಲ್ ಸೇಲ್ ವ್ಯಾಪಾರಿಗೆ 49,47,401/- ರೂ ವಂಚಿಸಿದ್ದಾನೆ. ಈ ಸಂಬಂಧ ತೆಂಗಿನಕಾಯಿ ವ್ಯಾಪಾರಿ ಸುಬೇಕ್ ಅಗರವಾಲ್ ಎಂಬುವರು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚೆನ್ನೈನ ಶ್ರೀವತ್ಸನ್ ಎಂಬಾತನೇ ವಂಚಿಸಿರುವ ಉದ್ಯಮಿ. ಪುಟ್ಟಣ್ಣ ಇಂಪೋರ್ಟ್ಸ್ ಅಂಡ್ ಎಕ್ಸ್ಪೋರ್ಟ್ ಎಂಬ ಹೆಸರಲ್ಲಿ ಉದ್ಯಮ ನಡೆಸುತ್ತಿರುವ ಶ್ರೀವತ್ಸನ್ ತಮಿಳುನಾಡಿನ ನಿವಾಸಿ. ಸುಬೇದ್ ಅಗರವಾಲ್ ರವರು ಮೈಸೂರಿನ ಮಂಡಿ ಮೊಹಲ್ಲಾದ ಅಕ್ಬರ್ ರಸ್ತೆಯಲ್ಲಿ ಸುನಿಲ್ ಕುಮಾರ್ ಅಗರವಾಲ್ ಹೆಸರಲ್ಲಿ 15 ವರ್ಷಗಳಿಂದ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಸುಬೇದ್ ಅಗರವಾಲ್ ರನ್ನ ಶ್ರೀವತ್ಸನ್ ಸಂಪರ್ಕಿಸಿ ವ್ಯಾಪಾರ ಕುದುರಿಸಿ ಸುಮಾರು 15 ಲಕ್ಷ ಮೌಲ್ಯದ ತೆಂಗಿನಕಾಯಿ ಖರೀದಿಸಿ 10 ಲಕ್ಷ ನೀಡಿದ್ದಾರೆ. ನಂತರ ಶ್ರೀವತ್ಸನ್ ರವರ ಸೂಚನೆಯಂತೆ ವಿವಿಧೆಡೆಗೆ ತೆಂಗಿನಕಾಯಿ ಲೋಡ್ ಕಳಿಸಿದ್ದಾರೆ. ತಿಂಗಳುಗಳು ಕಳೆದರೂ ತೆಂಗಿನಕಾಯಿ ಹಣ ಬಂದಿಲ್ಲ. ಶ್ರೀವತ್ಸನ್ ರವರಿಗೆ ಸೇರಿದ ನಾಲ್ಕು ಮೊಬೈಲ್ ಗಳು ಸ್ವಿಚ್ ಆಫ್ ಆಗಿದೆ. ಶ್ರೀವತ್ಸನ್ ರಿಂದ ಒಟ್ಟು 49,47,401/- ರೂ ಬಾಕಿ ಬರಬೇಕಿದೆ ಎಂದು ಸುಬೇದ್ ಅಗರವಾಲ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.





