ಮೈಸೂರು: ಬೆಂಗಳೂರಿನ ಕೋರ್ಟ್ ನೀಡಿದ ಅನುಮತಿಯಿಂದಾಗಿ ಈ ಬಾರಿಯೂ ಕೂಡ ನಟ ದರ್ಶನ್ ಮಕರ ಸಂಕ್ರಾಂತಿ ಹಬ್ಬವನ್ನು ಮೈಸೂರಿನಲ್ಲೇ ಆಚರಣೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರತಿ ವರ್ಷವೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕುಟುಂಬ ಸದಸ್ಯರು ಹಾಗೂ ಆಪ್ತರ ಜೊತೆ ಮೈಸೂರಿನ ಫಾರ್ಮ್ಹೌಸ್ನಲ್ಲೇ ಸಂಕ್ರಾಂತಿ ಹಬ್ಬ ಆಚರಣೆ ಮಾಡುತ್ತಿದ್ದರು.
ಫಾರ್ಮ್ಹೌಸ್ನಲ್ಲಿ ಹಬ್ಬದ ಪ್ರಯುಕ್ತ ಹಸುಗಳಿಗೆ ಸ್ನಾನ ಮಾಡಿಸಿ, ಸಿಂಗರಿಸಿ ಕಿಚ್ಚು ಹಾಯಿಸಿ, ಸಡಗರದಿಂದಲೇ ಸಂಕ್ರಾಂತಿ ಹಬ್ಬವನ್ನು ಬರಮಾಡಿಕೊಳ್ಳುತ್ತಿದ್ದರು. ಅದರಂತೆ ಈ ವರ್ಷವೂ ಕೂಡ ಹಬ್ಬ ಆಚರಿಸಲು ನಟ ದರ್ಶನ್ ಮನೆಯಲ್ಲಿ ಭರ್ಜರಿ ತಯಾರಿ ನಡೆದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದರಿಂದ ಮತ್ತು ಬೆಂಗಳೂರು ಬಿಟ್ಟು ತೆರಳಬಾರದು ಎಂದು ಕೋರ್ಟ್ ಆದೇಶ ಇರುವುದರಿಂದ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಎಲ್ಲಿ ಆಚರಿಸುತ್ತಾರೆ ಎಂಬ ಕುತೂಹಲ ಇತ್ತು.
ಆದರೆ ಈಗ ಈ ಎಲ್ಲಾ ಕುತೂಹಲಗಳಿಗೆ ತೆರೆ ಬಿದ್ದಿದ್ದು, ಬೆಂಗಳೂರು ಕೋರ್ಟ್ ಜನವರಿ.12ರಿಂದ 17ರವರೆಗೆ ಮೈಸೂರಿನಲ್ಲಿ ಇರಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಟ ದರ್ಶನ್ ಸಂಕ್ರಾಂತಿ ಹಬ್ಬ ಆಚರಣೆ ಮಾಡಲಿದ್ದಾರೆ.
ಈ ಬಾರಿಯೂ ಹಸು, ಕುದುರೆ ಕುರಿ ಹಾಗೂ ಮತ್ತಿತರ ಪ್ರಾಣಿಗಳನ್ನು ಸಿಂಗರಿಸಿ ಕುಟುಂಬದೊಡನೆ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಆಚರಣೆ ಮಾಡಲಿದ್ದಾರೆ.





