Mysore
20
overcast clouds
Light
Dark

ʼರಾಮಾಯಣʼಕ್ಕೆ ಯಶ್‌ ಕೂಡ ನಿರ್ಮಾಪಕ

ಕೆಜಿಎಫ್‌ ಚಿತ್ರ ಸರಣಿಯ ದೊಡ್ಡ ಯಶಸ್ಸಿನ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ರಾಕಿಂಗ್‌ ಸ್ಟಾರ್‌ ಯಶ್‌ ಇದೀಗ ಚಿತ್ರ ನಿರ್ಮಾಣದತ್ತಲೂ ಮುಖ ಮಾಡಿದ್ದಾರೆ. ಹೌದು, ದಂಗಲ್‌ ಖ್ಯಾತಿಯ ನಿತೇಶ್‌ ತಿವಾರಿ ಬೃಹತ್‌ ಮಟ್ಟದಲ್ಲಿ ನಿರ್ದೇಶಿಸಲು ಹೊರಟಿರುವ ʼರಾಮಾಯಾಣʼ ಚಿತ್ರಕ್ಕೆ ಯಶ್‌ ಬಂಡವಾಳ ಹೂಡಲಿದ್ದಾರೆ.

ರಣ್‌ಬೀರ್‌ ಕಪೂರ್‌ ರಾಮನ ಪಾತ್ರದಲ್ಲಿ ಹಾಗೂ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸಲಿರುವ ಈ ಚಿತ್ರಕ್ಕೆ ನಿರ್ಮಾಪಕ ನಮಿತ್‌ ಮಲ್ಹೋತ್ರ ಬಂಡವಾಳ ಹೂಡಿದ್ದು, ಇದೀಗ ಯಶ್‌ ಸಹ ತಮ್ಮ ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್‌ ಮೂಲಕ ಕೈ ಜೋಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಯಶ್‌ ʼಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುವುದು ನನ್ನ ಬಹುದಿನಗಳ ಕನಸಾಗಿದೆ. ಆ ಸಲುವಾಗಿ ನಾನು ಅತ್ಯುತ್ತಮ ವಿಎಫ್‌ಎಕ್ಸ್ ಸ್ಟುಡಿಯೋಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಲಾಸ್‌ಏಂಜಲೀಸ್‌ನಲ್ಲಿದ್ದೆ. ಆಗ ನನಗೆ ಗೊತ್ತಾಗಿದ್ದು, ಈ ವಿಎಫ್‌ಎಕ್ಸ್ ಸ್ಟುಡಿಯೋ ಹಿಂದಿರುವುದು ಓರ್ವ ಭಾರತೀಯ ಎಂದು. ಅವರೇ ನಮಿತ್. ನನ್ನ ಮತ್ತು ನಮಿತ್ ನಡುವೆ ಸಾಕಷ್ಟು ಚರ್ಚೆಗಳು ನಡೆದವು. ನಮ್ಮ ನಡುವಿನ ಸಾಕಷ್ಟು ಕಲ್ಪನೆಗಳು ಒಂದೇ ರೀತಿಯಲ್ಲಿದ್ದವು. ಭಾರತೀಯ ಚಿತ್ರರಂಗದ ದೃಷ್ಟಿಯಲ್ಲಿ ನಮ್ಮ ವಿಚಾರಗಳು ಸಂಪೂರ್ಣವಾಗಿ ಹೊಂದಾಣಿಕೆಯಾಯಿತು. ಈ ಚರ್ಚೆಗಳ ಸಮಯದಲ್ಲಿ, ರಾಮಾಯಣದ ವಿಷಯವು ಬಂತುʼ ಎಂದಿದ್ದಾರೆ.

ಈ ಚಿತ್ರ ಮಾತ್ರವಲ್ಲದೇ ಯಶ್‌ ತಾವೇ ನಟಿಸುತ್ತಿರುವ, ಗೀತು ಮೋಹನ್‌ದಾಸ್‌ ನಿರ್ದೇಶನದ ʼಟಾಕ್ಸಿಕ್‌ʼ ಚಿತ್ರಕ್ಕೂ ಕೆವಿಎನ್‌ ಪ್ರೊಡಕ್ಷನ್ಸ್‌ ಜತೆ ಬಂಡವಾಳ ಹೂಡಿದ್ದಾರೆ.

Tags: