Mysore
18
scattered clouds

Social Media

ಬುಧವಾರ, 11 ಫೆಬ್ರವರಿ 2026
Light
Dark

ನಾವೇನು ಛತ್ರಪತಿಗಳಾ? ಅಥವಾ ಚಕ್ರವರ್ತಿಗಳಾ? ಸುದೀಪ್‍ ಪ್ರಶ್ನೆ

‘ನಾನು ಯಾಕೆ ವ್ಯಂಗ್ಯ ಮಾಡಬೇಕು? ಅದರಿಂದ ಏನು ಸಿಗುತ್ತದೆ? ನಾವೇನು ಛತ್ರಪತಿಗಳಾ? ಅಥವಾ ಚಕ್ರವರ್ತಿಗಳಾ? ವಯಸ್ಸಾಗಿ ನಾವು ಸಹ ಒಂದು ದಿನ ಹೋಗುವವರೇ. ಬದುಕಿರಬೇಕಾದರೆ, ಸಿನಿಮಾ ನಮ್ಮ ಕೈ ಹಿಡಿದಿರಬೇಕಾದರೆ, ಬೆಳೆಯುವ ಪ್ರಯತ್ನ ಮಾಡಬೇಕು. ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಮಾಡಬೇಕು…’

ಹಾಗಂತ ಸುದೀಪ್‍ ಹೇಳಿದ್ದಾರೆ. ಅವರು ಹಾಗೆ ಹೇಳುವುದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಸುದೀಪ್‍ ಅಭಿನಯದ ಹೊಸ ಚಿತ್ರ ‘ಮ್ಯಾಕ್ಸ್’ ಬಿಡುಗಡೆಯಾದ ಸಂದರ್ಭದಲ್ಲಿ, ಅವರ ಆಪ್ತರು ಕೇಕ್‍ ಮೇಲೆ ‘Bossism ಕಾಲ ಮುಗೀತು, Maximum ಕಾಲ ಶುರುವಾಯ್ತು’ ಎಂದು ಬರೆಸಿದ್ದರು. ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್‍ ಎಂದು ದರ್ಶನ್‍ಗೆ ಕರೆಯುವುದರಿಂದ, ಈ ಮೂಲಕ ದರ್ಶನ್‍ಗೆ ಸುದೀಪ್‍ ಟಾಂಟ್ ಕೊಡುತ್ತಿದ್ದಾರೆ ಎಂದು ಸುದ್ದಿಯಾಯಿತು. ಈ ಬಗ್ಗೆ ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಸುದೀಪ್‍ ಅವರ ಆಪ್ತ ಪ್ರದೀಪ್‍ ಈ ಸಂಬಂಧ ಸಮಜಾಯಿಷಿ ಕೊಡುವ ಪ್ರಯತ್ನ ಮಾಡಿದರಾದರೂ, ಟೀಕೆಗಳು ಮುಂದುವರೆದಿದ್ದವು.

ಈ ಹಿನ್ನೆಲೆಯಲ್ಲಿ ಸುದೀಪ್ ‍ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಕುರಿತು ಸೋಮವಾರ ರಾತ್ರಿ ನಡೆದ ‘ಮ್ಯಾಕ್ಸ್’ ಚಿತ್ರದ ಸಂತೋಟಕೂಟದಲ್ಲಿ ಮಾತನಾಡಿದ ಸುದೀಪ್‍, ‘ನನ್ನ ಹುಡುಗನೊಬ್ಬ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡುತ್ತಾನೆ. ಚಿತ್ರ ನೋಡಿ ಬಂದು, ‘ಇವತ್ತಿನಿಂದ ಕಿಚ್ಚ ಬಾಸ್‍ ಅಂತ ಕರೆಯೋದು ನಿಲ್ಲಿಸಿ, ಕಿಚ್ಚ ಮಾಸ್‍ ಅಂತ ಕರೆಯಿರಿ’ ಎಂದು ಹೇಳುತ್ತಾನೆ. ಅದನ್ನೇ ಕೇಕ್‍ ಮೇಲೆ ಬರೆಸಿ ತರುತ್ತಾರೆ. ಅದನ್ನು ನೋಡಿದ ಒಂದು ವಾಹಿನಿಯವರು, ‘ಯಾರಿಗೋ ಟಾಂಟ್ ಕೊಟ್ರಾ ಕಿಚ್ಚ?’ ಎಂದು ಸುದ್ದಿ ಮಾಡುತ್ತಾರೆ. ನನಗೆ ಟಾಂಟ್ ಕೊಡುವ ಯೋಚನೆಯೇ ಇಲ್ಲ. ನಾನು ಬಾಸ್‍ ಅಂತ ಕರೆಯೋದು ನನ್ನ ತಂದೆಗೆ ಮಾತ್ರ. ಅವರು ಹಾಗೆ ಬರೆಸಿ ತಂದಾಗ, ನನ್ನ ತಂದೆ ಬಗ್ಗೆ ಹೇಳುತ್ತಿದ್ದೀಯ ಎಂದು ಕೇಳಬೇಕಿತ್ತು. ಆದರೆ, ಆ ಹುಡುಗನ ಮನಸ್ಸು ನನಗೆ ಚೆನ್ನಾಗಿ ಗೊತ್ತು’ ಎಂದರು.

‘ದರ್ಶನ್‍ ಅವರ ಅಭಿಮಾನಿಗಳಿಗೆ ಬಯ್ಯಬೇಡಿ. ಅವರು ನೋವಿನಲ್ಲಿದ್ದಾರೆ ಎಂದು ನಾನು ಈ ಮೊದಲು ಹೇಳಿದ್ದೆ. ಈ ಮಾತನ್ನು ನಾನು ಹೇಳಿರುವಾಗ, ಯಾಕೆ ಟಾಂಗ್‍ ಕೊಡಲಿ? ನಾವು ಯಾರಿಗೆ ಟಾಂಟ್‍ ಕೊಡುತ್ತಿದ್ದೀನಿ ಎಂದು ಹೇಳುತ್ತಿದ್ದಾರೋ, ಅವರು ನನ್ನ ಸಹೋದರನ ತರಹ ಇದ್ದವರು. ಒಬ್ಬ ನಟನ ಹೆಸರು ಮಾತ್ರ ತೆಗೆದುಕೊಂಡು ಟಾಂಟ್‍ ಎನ್ನುತ್ತಿದ್ದಾರೆ. ಯಶ್‍ಗೆ ಅವರ ಅಭಿಮಾನಿಗಳು ಯಶ್‍ ಬಾಸ್‍ ಎನ್ನುತ್ತಾರೆ. ಧ್ರುವಂಗೆ ಧ್ರುವ ಬಾಸ್‍, ಶಿವಣ್ಣ ಬಾಸ್‍, ಉಪ್ಪಿ ಬಾಸ್‍ ಎನ್ನುತ್ತಾರೆ. ಎಲ್ಲಾ ಅಭಿಮಾನಿಗಳಿಗೂ ಅವರ ಮೆಚ್ಚಿನ ನಟರು ಬಾಸ್‍ಗಳೇ. ನನಗೂ ದರ್ಶನ್‍ಗೂ ಏನೂ ಇಲ್ಲ. ಅವರು ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ’ ಎಂದರು.

ಕನ್ನಡ ಚಿತ್ರರಂಗ ಬಹಳ ನೋವಿನಲ್ಲಿದೆ ಎನ್ನುವ ಸುದೀಪ್, ‘ನಮ್ಮ ಹಿರಿಯರು ಚಿತ್ರರಂಗದ ಜವಾಬ್ದಾರಿಯನ್ನು ಹೊತ್ತು, ಅದನ್ನು ಬೆಳೆಸಿ, ಇವತ್ತು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ಅದನ್ನು ಇನ್ನಷ್ಟು ಬೆಳೆಸಿ, ಮುಂದಿನ ತಲೆಮಾರಿನವರಿಗೆ ಕೊಟ್ಟು ಹೋಗಬೇಕು. ಇದೊಂದು ಕುಟುಂಬ, ಇದೊಂದು ಸಂಪ್ರದಾಯ. ಕನ್ನಡ ಚಿತ್ರರಂಗ ಮುಖ್ಯಾನಾ? ನೀನಾ-ನಾನಾ ಎನ್ನುವುದು ಮುಖ್ಯಾನಾ? ಇದು ಯಾವುದೂ ಮುಖ್ಯವಲ್ಲ’ ಎಂದರು.

Tags:
error: Content is protected !!