Mysore
24
few clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ಹೆಸರು ಬದಲಿಸಿಕೊಂಡ ಶಶಿಕುಮಾರ್ ಮಗ ಅಕ್ಷಿತ್; ಹೊಸ ಹೆಸರೇನು?

ಶಶಿಕುಮಾರ್‍ ಮಗ ಕನ್ನಡ ಚಿತ್ರರಂಗಕ್ಕೆ ಬಂದು ಎರಡ್ಮೂರು ವರ್ಷಗಳೇ ಆಗಿವೆ. ಆದರೆ, ಅದ್ಯಾಕೋ ಇನ್ನೂ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಅಕ್ಷಿತ್‍ ಇದುವರೆಗೂ ‘ಓ ಮೈ ಲವ್‍’ ಮತ್ತು ‘ಕೇವೋಸ್‍’ ಎಂಬ ಚಿತ್ರಗಳಲ್ಲಿ ನಟಿಸಿದ್ದು, ಎರಡೂ ಸದ್ದು ಮಾಡಲಿಲ್ಲ.

ಹೀಗಿರುವಾಗಲೇ ಅಕ್ಷಿತ್‍ ತಮ್ಮ ಮೂರನೆಯ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ‘ಕಾದಾಡಿ’ ಹೆಸರಿನ ಈ ಚಿತ್ರವು ಇದೇ ಶುಕ್ರವಾರ (ಜುಲೈ 05) ಬಿಡುಗಡೆಯಾಗುತ್ತಿದೆ. ವಿಶೇಷ ಏನ್‍ ಗೊತ್ತಾ? ಈ ಚಿತ್ರದಲ್ಲಿ ಅಕ್ಷಿತ್‍ ತಮ್ಮ ಹೆಸರು ಬದಲಾಯಿಸಿಕೊಂಡಿದ್ದು, ಆದಿತ್ಯ ಎಂದು ಇಟ್ಟುಕೊಂಡಿದ್ದಾರೆ. ಇನ್ನು ಮುಂದೆ ಅದೇ ಹೆಸರಿನಲ್ಲಿ ಅವರು ಮುಂದುವರೆಯುತ್ತಾರಂತೆ.

ಇಷ್ಟಕ್ಕೂ ಅಕ್ಷಿತ್‍ ಹೆಸರು ಬದಲಾಯಿಸಿಕೊಂಡಿದ್ದೇಕೆ? ಜ್ಯೋತಿಷ್ಯ ಎಂಬ ಉತ್ತರ ಅವರಿಂದ ಬರುತ್ತದೆ. ಜ್ಯೋತಿಷ್ಯದಲ್ಲಿ ನಂಬಿಕೆ ಇರುವುದರಿಂದಲೇ ಅವರು ಈ ಹಿಂದೆ ಹೆಸರು ಬದಲಾಯಿಸಿಕೊಂಡಿದ್ದರಂತೆ. ‘ನನ್ನ ನಿಜವಾದ ಹೆಸರು ಆದಿತ್ಯ. ನನ್ನ ಸ್ನೇಹಿತರೆಲ್ಲಾ ಆದಿತ್ಯ ಅಂತಲೇ ಕರೆಯುತ್ತಾರೆ. ಅಕ್ಷಿತ್‍ ಎನ್ನುವ ಹೆಸರು ಚೆನ್ನಾಗಿದೆ, ಸಿನಿಮಾಗಾಗಿ ಬದಲಾಯಿಸಿಕೋ ಎಂದು ಯಾರೋ ಸಲಹೆ ನೀಡಿದರು. ಅದಕ್ಕಾಗಿ ಬದಲಾಯಿಸಿಕೊಂಡಿದ್ದೆ. ಆದರೆ, ಬಹಳಷ್ಟು ಜನರಿಗೆ ಹೆಸರು ಹೇಳೋಕೆ ಬರುತ್ತಿರಲಿಲ್ಲ. ಅಕ್ಷಯ್, ಅಕ್ಷತ್‍ ಎಂದೆಲ್ಲಾ ಕರೆಯುತ್ತಿದ್ದರು. ಯಾಕೋ ಸರಿ ಹೋಗುತ್ತಿಲ್ಲ ಎಂದು ನನ್ನ ಮೂಲ ಹೆಸರಿಗೆ ವಾಪಸ್ಸಾದೆ. ಇನ್ನು ಮುಂದೆ ಇದೇ ಹೆಸರಿನಲ್ಲಿ ಗುರುತಿಸಿಕೊಳ್ಳುವುದಕ್ಕೆ ಇಷ್ಟಪಡುತ್ತೇನೆ’ ಎನ್ನುತ್ತಾರೆ.

‘ಕಾದಾಡಿ’ ಚಿತ್ರದ ಕುರಿತು ಮಾತನಾಡುವ ಆದಿತ್ಯ, ‘ಇದೊಂದು ವಿಚಿತ್ರವಾದ ಪಾತ್ರ. ಇಲ್ಲಿ ನಾಯಕ ಒಳ್ಳೆಯವನೋ, ಕಟ್ಟವನೋ ಎಂದು ಗೆಸ್ ಮಾಡುವುದು ಕಷ್ಟ. ಮೂರೂವರೆ ವರ್ಷದ ಹಿಂದೆ ಪ್ರಾರಂಭವಾದ ಚಿತ್ರ. ಆಗ ನನ್ನ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಅವರು ಹೇಳಿದ ಕಥೆ ನನಗೆ ಬಹಳ ಇಷ್ಟವಾಯಿತು. ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಮಾಡೋಣ ಎಂದರು. ಆ ನಂತರ ಕನ್ನಡದಲ್ಲೂ ಡಬ್‍ ಮಾಡಿ ಬಿಡುಗಡೆ ಮಾಡುವ ನಿರ್ಧಾರವಾಯಿತು. ಕನ್ನಡದಲ್ಲಿ ನಾನೇ ಡಬ್‍ ಮಾಡಿದ್ದೀನಿ. ಕನ್ನಡದಲ್ಲಿ ಚಿತ್ರ ಮೊದಲು ಬಿಡುಗಡೆ ಆಗುತ್ತಿದೆ. ಆಗಸ್ಟ್ನಲಲಿ ಬೇರೆ ಭಾಷೆಗಳಲ್ಲಿ ಬಿಡಗುಡೆಯಾಗುತ್ತಿದೆ’ ಎನ್ನುತ್ತಾರೆ.

ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ, ‘ಕಾದಾಡಿ’ ಚಿತ್ರವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಭೀಮ್ಸ್ ಸಿಸಿರಿಲಿಯೋ ಸಂಗೀತ ಮತ್ತು ಡಿ. ಯೋಗಿಪ್ರಸಾದ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

‘ಕಾದಾಡಿ’ ಚಿತ್ರದಲ್ಲಿ ಆದಿತ್ಯಗೆ ಲಾವಣ್ಯ ಸಾಹುಕಾರ್‍ ಮತ್ತು ಚಾಂದಿನಿ ತಮಿಳರಸನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಪೋಸಾನಿ ಕೃಷ್ಣಮುರಳಿ, ರವಿ ಕಾಳೆ, ಮಾರಿಮುತ್ತು, ಪ್ರೇಮ್‌ ಮನೋಹರ್, ಶ್ರವಣ್‌ ರಾಘವೇಂದ್ರ ಮುಂತಾದವರು ನಟಿಸಿದ್ದಾರೆ.

Tags:
error: Content is protected !!