Mysore
28
scattered clouds

Social Media

ಸೋಮವಾರ, 11 ಮೇ 2026
Light
Dark

ಇದು ‘ಪ್ರೀತಿಯ ಹುಚ್ಚ’ನ ಕಥೆ: ನೈಜ ಘಟನೆ ಆಧರಿಸಿದ ಚಿತ್ರ ಏಪ್ರಿಲ್.18ಕ್ಕೆ ತೆರೆಗೆ

‘ಪ್ರೀತಿಯ ಹುಚ್ಚ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ‘ಹುಚ್ಚ’ ಚಿತ್ರದ ಸುದೀಪ್‍ ಪಾತ್ರ. ಆ ನಂತರ ‘ಚೆಲುವಿನ ಚಿತ್ತಾರ’ ಚಿತ್ರದ ಗಣೇಶ್‍ ಪಾತ್ರ ಸಹ ಕಣ್ಣ ಮುಂದೆ ಬರುತ್ತದೆ. ಈಗ ಆ ಚಿತ್ರಗಳನ್ನು ಹೋಲುವ ಇನ್ನೊಂದು ಚಿತ್ರ ಸದ್ದಿಲ್ಲದೆ ತಯಾರಾಗಿದೆ. ಅದೇ ‘ಪ್ರೀತಿಯ ಹುಚ್ಚ’. ಹೆಸರೇ ಹೇಳುವಂತೆ ಪ್ರೀತಿಗಾಗಿ ಹುಚ್ಚನಾಗುವ ಯುವಕನ ಕಥೆ ಇದು.

ಈ ಚಿತ್ರವು ಏಪ್ರಿಲ್‍.18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಇತ್ತೀಚೆಗೆ ಟ್ರೇಲರ್‍ ಬಿಡುಗಡೆ ಆಗಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ವಿ.ಕೃಷ್ಣೇಗೌಡ ಟ್ರೇಲರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

‌‌‌ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ವಿ.ಕುಮಾರ್ ‘ಪ್ರೀತಿಯ ಹುಚ್ಚ’ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಕುಮಾರ್‍, ‘ಈ ಕಥೆ ನೈಜ ಘಟನೆಯೊಂದನ್ನು ಆಧರಿಸಿದೆ. ನಾನು ಕೆಲಸದ ನಿಮಿತ್ತ ಮುಂಬೈಗೆ ಹೋದ ಸಂದರ್ಭದಲ್ಲಿ ಸ್ನೇಹಿತರ ಮೂಲಕ ವೃದ್ಧೆಯೊಬ್ಬರ ಪರಿಚಯವಾಯ್ತು. ಆಕೆ ಹೇಳಿದ ಒಂದು ಕಥೆ ಕೇಳಿ ನನ್ನನ್ನು ತುಂಬಾ ಕಾಡಿತು. ಆಕೆಯನ್ನು ಇಂದು ಕರೆದುಕೊಂಡು ಬಂದು ಪರಿಚಯಿಸೋಣ ಅಂದುಕೊಂಡಿದ್ದೆ. ಆದರೆ, ಆಕೆಗೆ ಸಮಸ್ಯೆ ಎದುರಾಗಬಹುದು ಎಂದು ಕರೆದುಕೊಂಡು ಬರಲಿಲ್ಲ’ ಎಂದರು.

ಇದು ಆಕೆಯ ಗೆಳತಿಯ ಜೀವನದಲ್ಲಿ ನಡೆದ ಕಥೆ ಎನ್ನುವ ಕುಮಾರ್, ‘ಅದನ್ನು ಕೇಳಿ ನನಗೆ ಕಣ್ಣೀರು ಬಂತು. ಅದನ್ನೇ ಸಿನಿಮಾಗೆ ತಕ್ಕ ಹಾಗೆ ಬದಲಿಸಿಕೊಂಡಿದ್ದೇನೆ. 90ರ ಕಾಲಘಟ್ಟದಲ್ಲಿ ಅರಸೀಕೆರೆ ಶ್ರವಣಬೆಳಗೊಳದ ಮಧ್ಯೆ ನಡೆದ ನೈಜಘಟನೆ ಇದು. ದಲಿತ ಯುವತಿಯನ್ನು ಗೌಡ್ರ ಮನೆಯವರು ಹೇಗೆ ನಡೆಸಿಕೊಳ್ತಿದ್ದರು ಅಂತ ತೋರಿಸಿದ್ದೇನೆ’ ಎಂದರು.

‘ಪ್ರೀತಿಯ ಹುಚ್ಚ’ ಚಿತ್ರದಲ್ಲಿ ವಿಜಯ್, ಕುಂಕುಮ್ ಹರಿಹರ, ಆಲಿಷಾ, ದುಬೈ ರಫೀಕ್, ನಾಗರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರು. ಮಂಡ್ಯ, ಚಿಕ್ಕಮಗಳೂರು, ಹಾಸನ, ಶ್ರವಣಬೆಳಗೊಳ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದೆ.

ಈ ಚಿತ್ರಕ್ಕೆ ತಶಿ ರಂಗರಾಜನ್ ಸಂಗೀತ ಸಂಯೋಜಿಸಿದ್ದು, ಯು.ಜಿ. ನಂದಕುಮಾರ್‍ ಸಹ ನಿರ್ಮಾಪಕರಾಗಿದ್ದಾರೆ.

Tags:
error: Content is protected !!