ಈ ಹಿಂದೆ ಕೆಲವು ಚಿತ್ರಗಳು ಹಣಕಾಸಿನ ಸಮಸ್ಯೆಗಳಿಂದಾಗಿ ಮುಂದೂಡಲ್ಪಟ್ಟ ಹಲವು ಉದಾಹರಣೆಗಳು ಇವೆ. ಇನ್ನೂ ಕೆಲವು ಚಿತ್ರಗಳು ಬಿಡುಗಡೆಯೇ ಆಗುವುದಿಲ್ಲ ಎಂಬ ಪರಿಸ್ಥಿತಿ ಎದುರಾಗಿ, ಕೊನೆಯ ಕ್ಷಣದ ಸಂಧಾನಗಳಿಂದ ಸಮಸ್ಯೆಗಳು ಬಗೆಹರಿದು, ಕೊನೆಗೆ ಚಿತ್ರ ಬಿಡುಗಡೆಯಾದ ಉದಾಹರಣೆಗಳೂ ಇವೆ. ಹಣಕಾಸಿನ ಸಮಸ್ಯೆಯಿಂದಾಗಿ ಇದೀಗ ‘ಸಂಜು ವೆಡ್ಸ್ ಗೀತಾ 2’ ಚಿತ್ರ ಇಂದು ಬಿಡುಗಡೆಯಾಗುತ್ತಿಲ್ಲ.
ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತರಲಾಗಿದ್ದು, ಈ ಚಿತ್ರದ ಬಿಡುಗಡೆ ಇದೀಗ ಮುಂದಕ್ಕೆ ಹೋಗಿದೆ. ಈ ವಿಷಯವನ್ನು ಚಿತ್ರತಂಡದವರೇ ಅಧಿಕೃತವಾಗಿ ಹೇಳಿದ್ದು, ಸದ್ಯದಲ್ಲೇ ಘೋಷಣೆ ಮಾಡುವುದಾಗಿ ಘೋಷಿಸಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 10ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಎರಡು ದಿನಗಳ ಹಿಂದೆಯೇ ಚಿತ್ರದ ಬಿಡುಗಡೆ ಅನುಮಾನ ಎಂಬ ಸುದ್ದಿಯೂ ಕೇಳಿಬಂದಿತ್ತು. ಚಿತ್ರಕ್ಕೆ ನಿರ್ಮಾಪಕರು ಆರು ಕೋಟಿ ರೂ.ಗಳಿಗೂ ಹೆಚ್ಚು ಸಾಲ ಮಾಡಿದ್ದು, ಅದನ್ನು ಬಿಡುಗಡೆಗೆ ಮುನ್ನ ತೀರಿಸುವುದಾಗಿ ಹೇಳಿದ್ದರಂತೆ. ಆದರೆ, ಅಂದುಕೊಂಡಂತೆ ತೀರಿಸಲಾಗದ ಕಾರಣ ಚಿತ್ರಕ್ಕೆ ಹಣದ ನೀಡಿದ ಫೈನಾನ್ಶಿಯರ್ಗಳು, ಚಿತ್ರ ಬಿಡುಗಡೆ ಆಗದಂತೆ ತಡೆಯಾಜ್ಞೆ ತಂದಿದ್ದಾರೆ ಎಂದು ರಾಜರಾಜೇಶ್ವರಿ ನಗರದಿಂದ ಸುದ್ದಿ ಬಂದಿದೆ.
ಈ ವಿಷಯದ ಕುರಿತು ನಿರ್ದೇಶಕ ನಾಗಶೇಖರ್ ಆಗಲೀ, ನಿರ್ಮಾಪಕ ಛಲವಾದಿ ಕುಮಾರ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಚಿತ್ರ ಮುಂದಕ್ಕೆ ಹೋಗಿದೆ ಎಂದು ಹೇಳುವ ಪೋಸ್ಟರ್ ಒಂದು ಬಿಡುಗಡೆ ಮಾಡಿದ್ದಾರೆ.
‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ಕನ್ನಡದ ಮಣ್ಣಿನ ಪ್ರೇಮಿಗಳ ಕಥೆ ಇದೆ. ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.





