Mysore
21
overcast clouds
Light
Dark

ಜಾಫ್ನಾ ಚಿತ್ರೋತ್ಸವದಲ್ಲಿ ಕಾಸರವಳ್ಳಿಗೆ ಜೀವಮಾನದ ಸಾಧನೆ ಪ್ರಶಸ್ತಿ

ಡಾ. ಗಿರೀಶ್‍ ಕಾಸರವಳ್ಳಿ ಕೆಲವು ತಿಂಗಳುಗಳಿಂದ ಒಂದಲ್ಲ ಒಂದು ಒಳ್ಳೆಯ ಸುದ್ದಿಯಲ್ಲಿದ್ದಾರೆ. ಕೆಲವು ತಿಂಗಳ ಹಿಂದೆ ಅವರ ‘ಬಿಂಬ ಬಿಂಬನ’ ಪುಸ್ತಕ ಬಿಡುಗಡೆ ಆಯಿತು. ಆ ನಂತರ ಅವರು ಅನಂತಮೂರ್ತಿ ವಿರಚಿತ ‘ಆಕಾಶ ಮತ್ತು ಬೆಕ್ಕು’ ಕಥೆಯನ್ನು ಚಿತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾಯ್ತು. ಇತ್ತೀಚೆಗಷ್ಟೇ ಇಟಲಿಯ ವೆನೀಸ್‍ನಲ್ಲಿ ನಡೆದ ವೆನೀಸ್‍ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಿರೀಶ್‍ ಕಾಸರ್ವಳ್ಳಿ ನಿರ್ದೇಶನದ ‘ಘಟಶ್ರಾದ್ಧ’, Restored Classics ವಿಭಾಗದಲ್ಲಿ ಪ್ರದರ್ಶನ ಕಂಡಿತ್ತು.

ಇದೀಗ ಗಿರೀಶ ಕಾಸರವಳ್ಳಿ ಯವರ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಮೂಡಿದೆ. ಇದೇ ಸೆಪ್ಟೆಂಬರ್‍ 3ರಿಂದ ಆರಂಭವಾದ ಜಾಫ್ನಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಗಿರೀಶ ಕಾಸರವಳ್ಳಿಯವರ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಲಾಗುತ್ತಿದೆ.

ಐದಯ ದಶಕಗಳ ಕಾಲ ತಮ್ಮ ಚಿತ್ರಯಾನದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ತಮ್ಮ ನಿಲುವಿಗೆ ಬಧ್ಧರಾಗಿ ಸದಭಿರುಚಿಯ ಮತ್ತು ಗಂಭೀರ ಚಿತ್ರಗಳನ್ನು ಮಾಡುತ್ತಾ ಬಂದ ಕಾಸರವಳ್ಳಿಯವರ ಚಿತ್ರಗಳು ಸಿನಿಮಾ ಕ್ಷೇತ್ರಕ್ಕೆ ನೀಡಿದ ಕಾಣಿಕೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಜಾಫ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಕಾಸರವಳ್ಳಿಯವರ ಜೊತೆಗೆ ಒಂದು ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. Behind the Lines of Parallel Cinema: Face to Face with Girish Kasaravalli ಎಂಬ ವಿಚಾರಸಂಕಿರಣವನ್ನು ಗೌಹಾಟಿಯ ವಿಶ್ವವಿದ್ಯಾಲದಲ್ಲಿ ಪ್ರೊಫೆಸರ್ ಆಗಿದ್ದು ಇದೀಗ ಶ್ರೀಲಂಕಾದ ಭಾರತೀಯ ಹೈ ಕಮಿಷನ್‌ನಲ್ಲಿ ವಿವೇಕಾನಂದ ಕಲ್ಚರ್ ಸೆಂಟರ್ ನ ನಿರ್ದೇಶಕರಾಗಿರುವ ಡಾ. ಅಂಕುರನ್ ದತ್ತ ಅವರು ನಡೆಸಿ ಕೊಡುತ್ತಾರೆ.

ಸೆಪ್ಟೆಂಬರ್ ೯ ರಂದು ನಡೆಯಲಿರುವ ಚಿತ್ರೋತ್ಸವದ ಮುಕ್ತಾಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದು ಅದನ್ನು ಸ್ವೀಕರಿಸಲು ಕಾಸರವಳ್ಳಿಯವರು ಜಾಫ್ನಾಕ್ಕೆ ತೆರಳಿದ್ದಾರೆ. ಸಂವಾದದ ಜೊತೆಗೆ ಕಾಸರವಳ್ಳಿ ನಿರ್ದೇಶನದ ಚಿತ್ರವಾದ ‘ಕನಸೆಂಬ ಕುದುರೆಯನೇರಿ’, ‘ದ್ವೀಪ’, ‘ಘಟಶ್ರಾದ್ಧ’ ಮತ್ತು ‘ತಾಯಿ ಸಾಹೇಬ’ ಚಿತ್ರಗಳು ಪ್ರದರ್ಶನವಾಗಲಿವೆ.

ಇನ್ನು, ಕಾಸರವಳ್ಳಿ ನಿರ್ದೇಶನದ ‘ಆಕಾಶ ಮತ್ತು ಬೆಕ್ಕು’ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಬಹಳಷ್ಟು ತೀರ್ಥಹಳ್ಳಿಯ ಪ್ರತಿಭೆಗಳು ನಟಿಸುತ್ತಿದ್ದಾರೆ.