Mysore
19
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ಮಕ್ಕಳು ಮಾಡಿದ ರೀಲ್ಸ್ ನೋಡಿ ಬಾಲ್ಯ ನೆನಪಾಯಿತು ಎಂದ ಗಣೇಶ್

ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಾಲ್ಕನೇ ಹಾಡು ಭಾನುವಾರ ಬಿಡುಗಡೆಯಾಗಿದೆ. ಇದುವರೆಗೂ ಬಿಡುಗಡೆಯಾಗಿರುವ ಮೂರೂ ಹಾಡುಗಳು ಜನಪ್ರಿಯವಾಗಿದ್ದು, ಅದರಲ್ಲೂ ಜಸ್ಕರಣ್‍ ಸಿಂಗ್‍ ಹಾಡಿರುವ ‘ದ್ವಾಪರ’ ಹಾಡಂತೂ ಸಾಕಷ್ಟು ಜನಪ್ರಿಯವಾಗಿದೆ.

‘ದ್ವಾಪರ’ ಹಾಡು ಯೂಟ್ಯೂಬ್‍ನ ಆನಂದ್ ಆಡಿಯೋ ಚಾನಲ್‍ನಲ್ಲಿ ಬಿಡುಗಡೆ ಜನಪ್ರಿಯವಾಗುವುದರ ಜೊತೆಗೆ ಸೋಷಿಯಲ್ ಮೀಡಿಯಾದ ಬೇರೆಬೇರೆ ವೇದಿಕೆಗಳಲ್ಲೂ ದೊಡ್ಡ ಹಿಟ್‍ ಆಗಿದೆಯಂತೆ. ಅದರಲ್ಲೂ ಸಣ್ಣ ಮಕ್ಕಳು ಸಹ ಸಾಕಷ್ಟು ರೀಲ್ಸ್ ಮಾಡುತ್ತಿರುವುದು ಗಣೇಶ್‍ಗೆ ಬಹಳ ಖುಷಿಯಾಗಿದೆ.

ಈ ಕುರಿತು ಮಾತನಾಡುವ ಗಣೇಶ್‍, ‘ಒಂದು ಹಾಡು ಯಶಸ್ವಿಯಾದಾಗ ಸಹಜವಾಗಿಯೇ ಖುಷಿ ಆಗುತ್ತದೆ. ಅದರಲ್ಲೂ ಚಿಕ್ಕ ಮಕ್ಕಳು ರೀಲ್ಸ್ ಮಾಡಿದಾಗ ಆಗುವ ಖುಷಿಯೇ ಬೇರೆ. ಈ ತಲೆಮಾರಿನವರಿಗೂ ನಾವು ರೀಚ್‍ ಆದ್ವಿ. ಇನ್ನು 10 ವರ್ಷ ಏನು ಸಮಸ್ಯೆ ಇಲ್ಲ ಎಂದನಿಸುತ್ತಿದೆ. ಇವತ್ತು ಬೆಳಿಗ್ಗೆ ಆರು ಮಕ್ಕಳು ಮಾಡಿದ ರೀಲ್ಸ್ ನೋಡಿದೆ. ಎಷ್ಟು ಚೆನ್ನಾಗಿ ಮಾಡಿದ್ದಾರೆಂದರೆ, ನನ್ನ ಬಾಲ್ಯ ನೆನಪಾಯಿತು. ಮೈಕ್‍ ಮುಂದೆ ನಾನೂ ಹೀಗೆ ಹಾಡುತ್ತಿದ್ದೆ ಎಂದನಿಸಿತು. ಡೌನ್‍ಲೋಡ್ ಮಾಡಿ ಸೋಷಿಯಲ್ ಮೀಡಿಯಾಗೆ ಹಾಕಿಸಿದೆ. ಹಾಡು, ನೃತ್ಯಕ್ಕಿಂತ ಹೆಚ್ಚಾಗಿ ನನಗೆ ಖಂಡಿದ್ದು ಆ ಮಕ್ಕಳ ಮುಗ್ಧ ಪ್ರೀತಿ. ಇದರಿಂದ ಬೇರೆಯವರಿಗೂ ಜೋಶ್ ಬರುತ್ತದೆ. ಅವರಿಗೂ ಏನಾದರೂ ಮಾಡುವುದಕ್ಕೆ ಪ್ರೇರೇಪಿಸುತ್ತದೆ’ ಎಂದರು.

‘ಕೃಷ್ಣಂ ಪ್ರಣಯ ಸಖಿ’ ಹಾಡುಗಳು ಯಶಸ್ವಿಯಾಗುವಲ್ಲಿ ನಿರ್ದೇಶಕ ಶ್ರೀನಿವಾಸರಾಜು ಮತ್ತು ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ ಅವರ ಪಾತ್ರ ಮಹತ್ವದ್ದು ಎನ್ನುವ ಗಣೇಶ್, ‘ಅರ್ಜುನ್‍ ಜನ್ಯ ಬಹಳ ಬ್ಯುಸಿಯಾಗಿದ್ದಾರೆ. ಅವರನ್ನು ಹಿಡಿಯೋದೇ ಕಷ್ಟ. ಹಾಗಿರುವಾಗ ಅವರಿಮದ ಇಷ್ಟು ಕೆಲಸವನ್ನು ನಿರ್ದೇಶಕ ಶ್ರೀನಿವಾಸರಾಜು ತೆಗೆದಿದ್ದಾರೆ. ಶ್ರೀನಿವಾಸರಾಜು ಒಂದೊಂದು ಹಾಡು ಸಹ ದೊಡ್ಡ ಹಿಟ್‍ ಆಗುತ್ತದೆ, ಆ ತರಹ ಮಾಡುತ್ತೀನಿ ಎಂದು ಹೇಳುತ್ತಿದ್ದರು. ಅದನ್ನು ನಿಜ ಮಾಡಿ ತೋರಿಸಿದ್ದಾರೆ. ‘ದ್ವಾಪರ’ ಹಿಟ್ ಆಗುತ್ತದೆ ಎಂದು ಗೊತ್ತಿತ್ತು. ಅದು ಬೇರೆ ಲೆವೆಲ್‍ಗೆ ಹೋಗುತ್ತದೆ ಎಂದು ಮೊದಲೇ ನಿರ್ದೇಶಕರು ಹೇಳಿದ್ದರು. ಹಾಗಾಗಿ, ಚಿತ್ರದ ಸಂಗೀತ, ಹಿನ್ನೆಲೆ ಸಂಗೀತಕ್ಕೆ ಯಶಸ್ಸು ಸಿಕ್ಕದರೆ, ಅದರ ಸಂಪೂರ್ಣ ಕ್ರೆಡಿಟ್‍ ಶ‍್ರೀನಿವಾಸರಾಜು ಮತ್ತು ಅರ್ಜುನ್‍ ಜನ್ಯ ಅವರಿಗೆ ಸಲ್ಲಬೇಕು’ ಎಂದರು.

ಇನ್ನು, ಆನಂದ್‍ ಆಡಿಯೋದವರು ದುಪ್ಪಟ್ಟು ಹಣ ಕೊಟ್ಟು ಚಿತ್ರದ ಆಡಿಯೋ ಹಕ್ಕುಗಳನ್ನು ಕೊಂಡಿದ್ದಾರಂತೆ. ‘ಆನಂದ್ ಆಡಿಯೋದವರ ಜೊತೆಗೆ ನನ್ನದು ಬಹಳ ದೊಡ್ಡ ಸಂಬಂಧ. ಈ ಚಿತ್ರದ ಆಡಿಯೋ ಹಕ್ಕುಗಳನ್ನು ಡಬ್ಬಲ್‍ ದುಡ್ಡು ಕೊಟ್ಟು ಆನಂದ್ ಆಡಿಯೋದವರು ಕೊಂಡಿದ್ದಾರೆ. ಮುಂದಿನ ಚಿತ್ರಕ್ಕೆ ಇನ್ನೂ ಡಬ್ಬಲ್‍ ದುಡ್ಡು ಕೊಡಲಿ. ಪ್ರತಿಯೊಬ್ಬ ಗೀತರಚನೆಕಾರ, ಗಾಯಕರು ಎಲ್ಲರಿಗೂ ಧನ್ಯವಾದಗಳು’ ಎಂದರು.

‘ಕೃಷ್ಣಂ ಪ್ರಣಯ ಸಖಿ’ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿದ್ದಾರೆ. ಶ್ರೀನಿವಾಸರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗಣೇಶ್‍ಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದು, ಮಿಕ್ಕಂತೆ ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ ಮುಂತಾದವರು ನಟಿಸಿದ್ದಾರೆ. ಚಿತ್ರವು ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Tags:
error: Content is protected !!