Mysore
24
clear sky

Social Media

ಬುಧವಾರ, 04 ಮಾರ್ಚ್ 2026
Light
Dark

ಐದು ವರ್ಷಗಳ ಹಿಂದಿನ ‘ತಲ್ವಾರ್’ಗೆ ಈಗ ಬಿಡುಗಡೆಯ ಭಾಗ್ಯ

ಧರ್ಮ ಕೀರ್ತಿರಾಜ್‍ ಅಭಿನಯದ ‘ತಲ್ವಾರ್’ ಎಂಬ ಚಿತ್ರವು ಸುಮಾರು ಐದು ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಚಿತ್ರದ ಮುಹೂರ್ತಕ್ಕೆ ದರ್ಶನ್‍ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು. ಆದರೆ, ಚಿತ್ರ ಮಾತ್ರ ಕಾರಣಾಂತರಗಳಿಂದ ಬಿಡುಗಡೆ ಆಗಿರಲಿಲ್ಲ. ಈಗ ಚಿತ್ರಕ್ಕೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದ್ದು, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆ ಆಗಲಿದೆ.

ಈ ಹಿಂದೆ ‘ಮಮ್ತಾಜ್’ ಎಂಬ ಚಿತ್ರ ನಿರ್ದೇಶಿಸಿದ್ದ ಮುರಳಿ, ಧರ್ಮ ಕೀರ್ತಿರಾಜ್ ಅಭಿನಯದಲ್ಲಿ ‘ತಲ್ವಾರ್‍’ ಚಿತ್ರ ಮಾಡಿದ್ದಾರೆ. ಧರ್ಮ ಇದುವರೆಗೂ ನಟಿಸಿರುವ ಚಿತ್ರಗಳಲ್ಲಿ ಅವರು ಲವ್ವರ್ ಬಾಯ್‍ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರು ಹೂವು ಪಕ್ಕಕ್ಕಿಟ್ಟು ‘ತಲ್ವಾರ್‍’ ಹಿಡಿದು, ಭೂಗತಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಹೆಸರು ಮಾಡಿರುವ ಸುರೇಶ್ ಬೈರಸಂದ್ರ, ಸ್ಟೋನ್ ಪಿಕ್ಚರ್ಸ್ ಬ್ಯಾನರ್‌ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಮುರಳಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಧರ್ಮ ಕೀರ್ತಿರಾಜ್‍, ‘ಇದೊಂದು ಆ್ಯಕ್ಷನ್ ಹಾಗೂ ತಾಯಿ ಸೆಂಟಿಮೆಂಟ್ ಕಥೆ ಇರುವ ಚಿತ್ರ. ಇದರಲ್ಲಿ ನನ್ನ ಹಲವು ಗೆಟಪ್‍ಗಳಿವೆ. ಚಿತ್ರದಲ್ಲಿ ಸಾಕಷ್ಟು ಮಾಸ್‍ ಅಂಶಗಳಿವೆ. ಈ ಚಿತ್ರದಲ್ಲಿ ನನ್ನ ಹೇರ್‍ ಸ್ಟೈಲ್‍ ಸಹ ಬದಲಾಗಿದೆ. ನನ್ನ ಪಾಲಿಗೆ ಇದು ವಿಶೇಷ ಚಿತ್ರ. ದುಡ್ಡಿಗಾಗಿ ಏನನ್ನಾದರೂ ಮಾಡಲು ಸಿದ್ದವಾಗಿರೋ ಯುವಕನ ಪಾತ್ರ ನನ್ನದು. ಆನಂತರ ಆತನಿಗೆ ಪಶ್ಚಾತ್ತಾಪವಾಗಿ ಏನು ಮಾಡುತ್ತಾನೆ ಎಂಬುದನ್ನು ‘ತಲ್ವಾರ್’ ಚಿತ್ರದ ಮೂಲಕ ಹೇಳಿದ್ದೇವೆ ಎಂದರು.

ನಿರ್ದೇಶಕ ಮುರಳಿ ಮಾತನಾಡಿ, ‘ಇದೊಂದು ರೌಡಿಸಂ ಹಾಗೂ ಸಂಬಂಧಗಳ ಸುತ್ತ ನಡೆಯುವ ಕಥೆ. ನಾನು ಓದುವ ಸಂದರ್ಭದಲ್ಲಿ ನಮ್ಮ ಹಾಸ್ಟೆಲ್‌ ಬಳಿ ನನ್ನ ಕಣ್ಣೆದುರೇ ನಡೆದಂತಹ ನೈಜ ಘಟನೆ ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಧರ್ಮ ಅವರ ಜೊತೆಗೆ ಇದು ನನ್ನ ಎರಡನೇ ಸಿನಿಮಾ. ನಾಲ್ಕು ಸಾಹಸ ಸನ್ನಿವೇಶಗಳು ಈ ಚಿತ್ರದ ಹೈಲೈಟ್. ಈ ಚಿತ್ರದಲ್ಲಿ ನಟ ಧರ್ಮ ಅವರು ವಿಭಿನ್ನವಾಗಿ ಕಾಣಿಸಿದ್ದಾರೆ. ಜನವರಿ ಎರಡನೇ ವಾರ ಟ್ರೇಲರ್ ಬಿಡುಗಡೆ ಮಾಡುತ್ತೇವೆ’ ಎಂದರು.

‘ತಲ್ವಾರ್’ ಚಿತ್ರಕ್ಕೆ ಪ್ರವೀಣ್ ‍ಸಂಗೀತ ಸಂಯೋಜಿಸಿದರೆ, ರಮೇಶ್‍ ಕೃಷ್ಣ ಅವರ ಹಿನ್ನೆಲೆ ಸಂಗೀತವಿದೆ. ಧರ್ಮ ಕೀರ್ತಿರಾಜ್‍ ಜೊತೆಗೆ ಅದಿತಿ ರಾವ್, ಜೆಕೆ, ಅವಿನಾಶ್ (ಜ್ಯೂನಿಯರ್‍ ದರ್ಶನ್), ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ.

Tags:
error: Content is protected !!