ಸುಮಾರು ಒಂದೂವರೆ ವರ್ಷಗಳ ಹಿಂದೆ ಪ್ರಜ್ವಲ್ ಅಭಿನಯದ ‘ಕರಾವಳಿ’ ಚಿತ್ರ ಪ್ರಾರಂಭವಾಗಿತ್ತು. ಆಗಾಗ ಚಿತ್ರದ ಟೀಸರ್, ಪೋಸ್ಟರ್ ಬಿಡುಗಡೆಯ ಸುದ್ದಿ ಬರುತ್ತಿದ್ದು ಬಿಟ್ಟರೆ, ಚಿತ್ರ ಮುಗಿದ ಸುದ್ದಿಯೇ ಇರಲಿಲ್ಲ. ಇದೀಗ ಚಿತ್ರತಂಡದವರು ಚಿತ್ರೀಕರಣ ಮುಗಿಸಿದ್ದು, ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ.
‘ಕರಾವಳಿ’ ಹೆಸರೇ ಹೇಳುವ ಹಾಗೆ ಅಲ್ಲಿನ ಸಂಸ್ಕೃತಿ, ಸೊಗಡಿನ ಬಗ್ಗೆ ಇರುವ ಸಿನಿಮಾ. ಚಿತ್ರವು ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆಯನ್ನು ಹೇಳುತ್ತದೆ. ಪಕ್ಕಾ ಗ್ರಾಮೀಣ ಹಿನ್ನೆಲೆಯಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಹಿಂದೆ ‘ರಥಾವರ’ ಸಿನಿಮಾ ಮಾಡಿದ್ದ ಚಂದ್ರಶೇಖರ್ ಬಂಡಿಯಪ್ಪ, ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ದೊಡ್ಡಾಲದ ಮರದ ಬಳಿ ಸೆಟ್ ಹಾಕಿ ಕೊನೆಯ ದಿನದ ಚಿತ್ರೀಕರಣ ಮಾಡಲಾಯಿತು. ವಿಕ್ರಮ್ ಮೋರ್ ಸಾಹಸ ನಿರ್ದೇಶನದಲ್ಲಿ ಒಂದಿಷ್ಟು ಸಾಹಸ ದೃಶ್ಯಗಳನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಪ್ರಜ್ವಲ್ ದೇವರಾಜ್ ಮಹಿಷಾಸುರನ ಅವತಾರವೆತ್ತಿದ್ದರು.
ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಪ್ರಜ್ವಲ್ ದೇವರಾಜ್, ‘ನಾನೆಂದು ಈ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ಶ್ರಮ ಹಾಕಿದ್ದೀವಿ. ಅಷ್ಟೇ ಅಲ್ಲ, ಭಯಪಟ್ಟು ಮಾಡಿರುವ ಪಾತ್ರವಿದು, ತುಂಬಾ ಖುಷಿ ಇದೆ’ ಎಂದು ಹೇಳಿದರು.
ಇನ್ನು, ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮಾವೀರ ಎನ್ನುವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ರಾಜ್ ಬಿ ಶೆಟ್ಟಿ ಪಾತ್ರದ ಮೊದಲ ನೋಟ ಬಿಡುಗಡೆಯಾಗಿದೆ. ಮಿಕ್ಕಂತೆ ಮಿತ್ರ, ರಮೇಶ್ ಇಂದಿರ, ‘ಸಿದ್ಲಿಂಗು’ ಶ್ರೀಧರ್ ಹಾಗೂ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ.
‘ಕರಾವಳಿ’ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸುವ ಜೊತೆಗೆ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ಮೂಲಕ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ, ಅಭಿಮನ್ಯು ಸದಾನಂದನ್ ಛಾಯಾಗ್ರಹಣವಿದೆ.





