ನಂಜನಗೂಡು: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಬೆನ್ನಲ್ಲೇ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು.
ಧನ್ಯತಾ ಜೊತೆ ಡಾಲಿ ಮದುವೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದರು.
ಈ ವೇಳೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದು, ಮದುವೆಗೆ ಆಗಮಿಸುವಂತೆ ಆಮಂತ್ರಣ ಪತ್ರ ನೀಡಿದರು.
ಬಳಿಕ ಸುತ್ತೂರು ಮಠದಲ್ಲಿ ಶಿವರಾತ್ರಿ ಶಿವಯೋಗಿಗಲ 1065ನೇ ಜಯಂತಿಯ ಹಿನ್ನೆಲೆಯಲ್ಲಿ ನಂದಿ ಧ್ವಜಕ್ಕೆ ಪೂಜೆ ಜರುಗಿತು. ಈ ವೇಳೆ ನಂದಿಧ್ವಜ ಡಾಲಿ ಧನಂಜಯ್ ಅವರು ನಂದಿ ಧ್ವಜ ಹೊತ್ತು ಕುಣಿದು ಸಂಭ್ರಮಿಸಿದರು. ಡಾಲಿ ಹಾಗೂ ಧನ್ಯತಾಗೆ ನಟ ನಾಗಭೂಷಣ್ ಕೂಡ ಸಾಥ್ ನೀಡಿದರು. ಈ ವೇಳೆ ಡಾಲಿಯನ್ನು ನೋಡಿದ ಅಭಿಮಾನಿಗಳು ಧನಂಜಯ್ ಪರ ಜೈಕಾರ ಹಾಕಿ, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಇನ್ನು 2025ರ ಫೆಬ್ರವರಿ 16ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಟ ಡಾಲಿ ಧನಂಜಯ್ ಮದುವೆ ಆಗಲಿದ್ದಾರೆ. ಈ ಮದುವೆಗೆ ರಾಜಕೀಯ ಗಣ್ಯರು ಹಾಗೂ ಸಿನಿಮಾ ಸ್ಟಾರ್ಗಳಿಗೆ ಈಗಾಗಲೇ ಆಮಂತ್ರಣ ಪತ್ರ ನೀಡಲಾಗಿದ್ದು, ಇಂದು ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಮದುವೆಗೆ ಆಗಮಿಸುವಂತೆ ಆಮಂತ್ರಣ ಪತ್ರ ನೀಡಿದ್ದಾರೆ.





