‘ಪಾರಿಜಾತ’ ಚಿತ್ರದ ಮೂಲಕ ಕನ್ನಡದಲ್ಲಿ ಹೀರೋ ಆಗಿ, ನಂತರ ಕನ್ನಡ, ತೆಲುಗು, ತಮಿಳು ಸೇರಿದಂತೆ ಬೇರೆ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿರುವ ಚರಣ್ ರಾಜ್, ಇದೀಗ ನಿರ್ದೇಶನಕ್ಕಿಳಿದಿದ್ದಾರೆ. ಹಾಗಂತ ಅವರಿಗೆ ನಿರ್ದೇಶನ ಹೊಸದಲ್ಲ. ಈಗಾಗಲೇ ಅವರು ತೆಲುಗು-ತಮಿಳಿನಲ್ಲಿ ಚಿತ್ರ ನಿರ್ದೇಶನ ಮಾಡಿದ್ದು, ಇದೀಗ ಮೊದಲ ಬಾರಿಗೆ ಕನ್ನಡದಲ್ಲಿ ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.
ಈ ಬಾರಿ, ಅವರು ತಮ್ಮ ಮಗನನ್ನು ಕನ್ನಡದಲ್ಲಿ ಪರಿಚಯಿಸುತ್ತಿರುವುದಷ್ಟೇ ಅಲ್ಲ, ಆತನನ್ನು ಅವರೇ ನಿರ್ದೇಶನ ಮಾಡುವುದಕ್ಕೆ ಮುಂದಾಗಿದ್ದಾರೆ. ಚರಣ್ ರಾಜ್ ಅವರ ದ್ವಿತೀಯ ಪುತ್ರ ದೇವ್ ಚರಣ್ ರಾಜ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ದೇವ್ ಅಭಿನಯದಲ್ಲಿ ಚರಣ್ ರಾಜ್, ತಮಿಳಿನಲ್ಲಿ ‘ಕುಪ್ಪನ್’ ಎಂಬ ಚಿತ್ರ ನಿರ್ದೇಶಿಸುವ ಮೂಲಕ ಆತನನ್ನು ಪರಿಚಯಿಸಿದ್ದರು. ಈಗ ಅವರು ತಮ್ಮ ಮಗನನ್ನು ಕನ್ನಡದಲ್ಲಿ ಪರಿಚಯಿಸುತ್ತಿದ್ದಾರೆ.
ಚರಣ್ ರಾಜ್ ನಿರ್ದೇಶಿಸಲಿರುವ ಹೊಸ ಚಿತ್ರವು ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ. ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದ್ದು, ABCR ಫಿಲಂ ಫ್ಯಾಕ್ಟರಿ ಬ್ಯಾನರ್ ನಲ್ಲಿ ಅಶ್ವಥ್ ಬಳಗೆರೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಬಹುಭಾಷಾ ನಟ ಕಿಶೋರ್ ಸಹ ಈ ಚಿತ್ರದಲ್ಲಿ ನಟಿಸಲಿದ್ದು, ಸಾಗರ್ ಗುರುರಾಜ್ ಸಂಗೀತ ನಿಹಾಗೂ ಪೃಥ್ವಿ ಛಾಯಾಗ್ರಹಣವಿರುವ ಈ ಚಿತ್ರದ ಪಾರ್ತವರ್ಗದ ಆಯ್ಕೆ ಆಗುತ್ತಿದೆ.
ಈ ಚಿತ್ರದ ಕುರಿತು ಮಾತನಾಡುವ ಚರಣ್ ರಾಜ್, ‘ಇದೊಂದು ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರ. ನಾನೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದೇನೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಲೇಜ್ನಲ್ಲೇ ನಡೆಯಲಿದ್ದು, ಕಾಲೇಜ್ ರಜಾ ಶುರುವಾದ ತಕ್ಷಣ ನಮ್ಮ ಚಿತ್ರದ ಚಿತ್ರೀಕರಣ ಸಹ ಆರಂಭವಾಗಲಿದೆ. ಕನ್ನಡದ ಚಿತ್ರೀಕರಣ ಬೆಂಗಳೂರಿನಲ್ಲಿ, ತಮಿಳಿನ ಚಿತ್ರೀಕರಣ ಪಾಂಡಿಚೇರಿ ಹಾಗೂ ಕಡಲೂರಿನಲ್ಲಿ ಮತ್ತು ತೆಲುಗು ಭಾಷೆಯ ಚಿತ್ರೀಕರಣ ಹೊಂಗನೂರು ಮುಂತಾದ ಕಡೆ ನಡೆಯಲಿದೆ. ಈ ಚಿತ್ರದ ಮೂಲಕ ನನ್ನ ದ್ವಿತೀಯ ಪುತ್ರ ದೇವ್ ಚರಣ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ನನಗೆ ತೋರಿದ ಪ್ರೀತಿ ಹಾಗೂ ನೀಡಿದ ಪ್ರೋತ್ಸಾಹವನ್ನು ಮಗನಿಗೂ ಕೊಡಿ’ ಮನವಿ ಮಾಡಿದ್ದಾರೆ.





