‘ಬಿಚ್ಚುಗತ್ತಿ’ ನಂತರ ರಾಜವರ್ಧನ್ ಅಭಿನಯದ ಯಾವೊಂದು ಚಿತ್ರ ಸಹ ದೊಡ್ಡ ಸದ್ದು ಮಾಡಲಿಲ್ಲ. ಕಳೆದ ವರ್ಷ ಬಿಡುಗಡೆಯಾದ ‘ಹಿರಣ್ಯ’ ಮತ್ತು ‘ಪ್ರಣಯಂ’, ಈ ವರ್ಷ ಬಿಡುಗಡೆಯಾದ ‘ಗಜರಾಮ’ ಚಿತ್ರಗಳು ಗಮನಸೆಳೆಯುವಲ್ಲಿ ವಿಫಲವಾದವು. ಈ ಮಧ್ಯೆ, ರಾಜವರ್ಧನ್, ತೆಲುಗಿಗೆ ಹೋಗುತ್ತಾರೆ ಎಂಬುದೂ ಸುದ್ದಿಯಾಯಿತು.
ಹೀಗಿರುವಾಗಲೇ, ರಾಜವರ್ಧನ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿರುವ ಸುದ್ದಿಯೊಂದು ಬಂದಿದೆ. ವಿಶೇಷವೆಂದರೆ, ಈ ಚಿತ್ರವನ್ನು ‘ಬಿಗ್ ಬಾಸ್’ ಸ್ಪರ್ಧಿ ಮತ್ತು ಸದ್ಯ ಸುದೀಪ್ ಅವರ ಮ್ಯಾನೇಜರ್ ಆಗಿ ಗುರುತಿಸಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದಾರೆ.
ಪಕ್ಕಾ ಕನ್ನಡದ ಸೂಗಡಿನ ಮಾಸ್ ಮನರಂಜನೆಯ ಕಥೆಯನ್ನು ರಾಜವರ್ಧನ್ಗಾಗಿ ಚಕ್ರವರ್ತಿ ಚಂದ್ರಚೂಡ್ ಬರೆದಿದ್ದು, ಅದನ್ನು ತಾವೇ ನಿರ್ದೇಶನ ಮಾಡುತ್ತಿದ್ದಾರೆ. ಹಲವು ತಿಂಗಳುಗಳಿಂದ ಈ ಚಿತ್ರದ ಕುರಿತು ಚರ್ಚೆಗಳು ನಡೆಯುತ್ತಿದ್ದು, ಮೇ ತಿಂಗಳಲ್ಲಿ ಚಿತ್ರದ ಸಂಪೂರ್ಣ ವಿವರಗಳನ್ನು ಚಿತ್ರತಂಡದವರು ನೀಡುವ ಸಾಧ್ಯತೆ ಇದೆ. ಸದ್ಯಕ್ಕೆ ಈ ಚಿತ್ರವನ್ನು ಯಾರು ನಿರ್ಮಿಸುತ್ತಾರೆ ಮತ್ತು ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎಂಬ ವಿಷಯವನ್ನು ಗೌಪ್ಯವಾಗಿ ಇಡಲಾಗಿದೆ.
ಈ ಮಧ್ಯೆ, ರಾಜವರ್ಧನ್, ನಟಿ ರಾಗಿಣಿ ಮತ್ತು ‘ಚಿತ್ರಸಂತೆ’ ನಿಯತಕಾಲಿಕೆಯ ಗಿರೀಶ್ ಗೌಡ ಅವರ ಜೊತೆಗೆ ಸೇರಿ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಪ್ರಾರಂಭಿಸುತ್ತಿರುವ ಸುದ್ದಿ ಇದ್ದು, ಮೇ 01ರಂದು ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.





