ಎರಡು ದಶಕಗಳ ಹಿಂದೆ ‘ಚೈತ್ರದ ಪ್ರೇಮಾಂಜಲಿ’, ‘ಕರ್ಪೂರದ ಗೊಂಬೆ’, ‘ಲಕ್ಷ್ಮಿ ಮಹಾಲಕ್ಷ್ಮಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಶ್ವೇತಾ, ಇದೀಗ ಹಲವು ವರ್ಷಗಳ ನಂತರ ಮತ್ತೊಮ್ಮೆ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದಾರೆ.
ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ವಿನೋದಿನಿ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ಶ್ವೇತಾ, ಕನ್ನಡ ಚಿತ್ರರಂಗದಿಂದ ದೂರವಿದ್ದರೂ, ತಮಿಳು ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದರು. ಸದ್ಯ, ‘ಲಕ್ಷ್ಮಿ ನಿವಾಸ’ ಎಂಬ ಧಾರಾವಾಹಿ ಮೂಲಕ ಅವರು ಕನ್ನಡಕ್ಕೆ ವಾಪಸ್ಸಾಗಿದ್ದರು. ಖಾಸಗಿ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು, ಶ್ವೇತಾ ಪಾತ್ರ ಮತ್ತು ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೀಗಿರುವಾಗಲೇ, ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಚಿತ್ರದಲ್ಲಿ ಶ್ವೇತಾ ನಟಿಸುತ್ತಿದ್ದಾರೆ. 2003ರಲ್ಲಿ ತೆರೆಕಂಡ ‘ಕುಟುಂಬ’ ಸಿನಿಮಾದಲ್ಲಿ ಶ್ವೇತಾ ಕೊನೆಯ ಬಾರಿಗೆ ಅಭಿನಯಿಸಿದ್ದರು. 20 ವರ್ಷಗಳ ವಿರಾಮದ ನಂತರ ನಟನೆಗೆ ಮರಳಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಹೊಸ ಅಧ್ಯಾಯವನ್ನು ಸಣ್ಣ ಪರದೆಯ ಮೂಲಕ ಮತ್ತೆ ಆರಂಭಿಸಿದ್ದು, ಇದೀಗ ಬಹಳ ಇಷ್ಟಪಟ್ಟು ‘ಚೌಕಿದಾರ್’ ಸಿನಿಮಾ ಒಪ್ಪಿಕೊಂಡಿದ್ದಾರೆ.
ಇದುವರೆಗೂ ಪ್ರೇಮಕಥೆಗಳಲ್ಲೇ ಹೆಚ್ಚಾಗಿ ಅಭಿನಯಿಸಿದ್ದ ಪೃಥ್ವಿ ಅಂಬಾರ್, ‘ಚೌಕಿದಾರ್’ ಚಿತ್ರದಲ್ಲಿ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಧನ್ಯಾ ರಾಮ್ಕುಮಾರ್ ಅಭಿನಯಿಸುತ್ತಿದ್ದಾರೆ. ವಿಶೇಷ ಪಾತ್ರಗಳಲ್ಲಿ ಸಾಯಿಕುಮಾರ್ ಮತ್ತು ಧರ್ಮ ನಟಿಸುತ್ತಿದ್ದಾರೆ.
‘ಚೌಕಿದಾರ್’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬಹುಭಾಷೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಕಲ್ಲಹಳ್ಳಿ ಚಂದ್ರಶೇಖರ್, VS ಎಂಟರ್ ಟೈನ್ಮೆಂಟ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.