ಬೆಂಗಳೂರು: ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿನ ಕಾಪಿರೈಟ್ಸ್ ಉಲ್ಲಂಘನೆ ಆರೋಪದಲ್ಲಿ ಸಿಲುಕಿರುವ ಕನ್ನಡದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಇಂದು (ಶುಕ್ರವಾರ, ಆ.2) ವಿಚಾರಣೆ ಎದುರಿಸಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಈ ಎಲ್ಲವನ್ನೂ ನ್ಯಾಯಾಲಯದಲ್ಲಿ ನೋಡಿಕೊಳ್ಳೋಣ ಎಂದು ಹೇಳುವ ಮೂಲಕ ನ್ಯಾಯಾಲಯ ಮೊರೆ ಹೋಗುವುದಾಗಿ ರಕ್ಷಿತ್ ಹೇಳಿದ್ದಾರೆ.
ಮೊದಲಿಗೆ ಇದು ಉಲ್ಲಂಘನೆಯಲ್ಲ. ಕನ್ನಡದ ಹಾಡನ್ನು ಕನ್ನಡ ಚಿತ್ರಗಳಲ್ಲಿ ಬಳಕೆ ಮಾಡುವುದು ತಪ್ಪಾ? ಕೇವಲ ಸಾಂದರ್ಭಿಕವಾಗಿ ಹಾಡನ್ನು ಬಳಸಲಾಗಿದೆಯಷ್ಟೆ. ಕಾಪಿರೈಟ್ಸ್ ಬಗ್ಗೆ ನ್ಯಾಯಾಲಯದಲ್ಲಿ ನೋಡಿಕೊಳ್ಳೋಣ ಎಂದು ಹೇಳಿದರು.
ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಬಳಸಲಾದ ಹಾಡು ವಿಚಾರಕ್ಕೆ ಸಂಬಂಧಿಸಿದಂತೆ ಅತೀ ಹೆಚ್ಚು ಹಣದ ಬೇಡಿಕೆಯಿಟ್ಟಿದ್ದರು. ಹಾಗಾಗಿ ಮುಂದೆ ನೋಡೋಣ ಎಂದು ಹೇಳಿ ಬಂದಿದ್ದೆ. ಈಗ ಚಿತ್ರ ರಿಲೀಸ್ ಆದ ಬಳಿಕ ಈಗ ಕೇಸ್ ಹಾಕಿದ್ದಾರೆ. ಮುಂದೆ ಇದನ್ನು ನೋಡಕೊಳ್ಳಲಾಗುವುದು ಎಂದು ಹೇಳಿದರು.
ಎಂಟಿಆರ್ ಮೂಸಿಕ್ ಪಾಲುದಾರ ನವೀನ್ ಅವರು ಜು.15ರಂದು ರಕ್ಷಿತ್ ವಿರುದ್ಧ ಕಾಪಿರೈಟ್ಸ್ ದೂರು ನೀಡಿದ್ದರು. ನ್ಯಾಯ ಎಲ್ಲಿದೆ ಚಿತ್ರದ ಹಾಡು ಹಾಗೂ ಗಾಳಿ ಮಾತು ಚಿತ್ರದ ಒಮ್ಮೆ ನಿನ್ನನ್ನು ಹಾಡುಗಳನ್ನು ಪರಮ್ ಸ್ಟುಡಿಯೋಸ್ ಅನಧಿಕೃತವಾಗಿ ಬಳಸಿಕೊಂಡಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರದಲ್ಲಿಯೂ ಸಹಾ ಇದೇ ರೀತಿ ಕಾಪರೈಟ್ಸ್ ಎದುರಿಸಿದ್ದರು.