Mysore
23
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

9 ವರ್ಷಗಳ ಹಿಂದಿನ ಬ್ಲಾಗ್ ಈಗ ಸಿನಿಮಾ ಆಯ್ತು!

ರಕ್ಷಿತ್‍ ಶೆಟ್ಟಿ ನಿರ್ಮಾಣದ ಮತ್ತು ವಿಹಾನ್‍ ಗೌಡ, ಅಂಕಿತಾ ಅಮರ್‍ ಮತ್ತು ಮಯೂರಿ ನಟರಾಜ್ ನಟಿಸಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರವು ಸೆಪ್ಟೆಂಬರ್ 05ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರವನ್ನು ಚಂದ್ರಜಿತ್‍ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಆಗುವುದಕ್ಕೆ ಹಿನ್ನೆಲೆ ಏನು ಗೊತ್ತಾ? ಒಂಬತ್ತು ವರ್ಷಗಳ ಹಿಂದೆ ಅವರೇ ಬರೆದ ಒಂದು ಬ್ಲಾಕ್‍ ಕಾರಣವಂತೆ. ಹಾಗಂತ ಖುದ್ದು ರಕ್ಷಿತ್‍ ಶೆ್ಟ್ಟಿ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ರಕ್ಷಿತ್‍, ‘ಒಂಬತ್ತು ವರ್ಷಗಳ ಹಿಂದೆ ಚಂದ್ರಜಿತ್‍, ‘Dew Drops Sunshine’ ಎಂಬ ಬ್ಲಾಗ್ ಬರೆದು, ನನಗೆ ಮೆಸೇಜ್‍ ಮಾಡಿದ್ದರು. ಸಾಮಾನ್ಯವಾಗಿ ಫೇಸ್‍ಬುಕ್‍ ಮೆಸೇಜ್‍ಗಳನ್ನು ನಾನು ಓದುವುದಿಲ್ಲ. ಆದರೆ, ಆ ದಿನ ಲಿಂಕ್‍ ಓಪನ್‍ ಮಾಡಿ ಬ್ಲಾಗ್‍ ಓದಿದೆ. ನನಗೆ ಅವರ ಬರವಣಿಗೆ ಶೈಲಿ ಬಹಳ ಇಷ್ಟವಾಯಿತು. ಚಂದ್ರಜಿತ್‍ಗೆ ಅವರದ್ದೇ ಆದ ಒಂದು ವಿಭಿನ್ನವಾದ ಶೈಲಿ ಇದೆ. ಆ ತರಹದ ಶೈಲಿ ನಾನೆಲ್ಲೂ ಓದಿರಲಿಲ್ಲ. ಒಂಬತ್ತು ವರ್ಷಗಳ ನಂತರ ಅದೇ ಬ್ಲಾಗ್‍ ಸಿನಿಮಾ ಆಗಿದೆ’ ಎಂದರು.

ಈ ಚಿತ್ರದ ಅಭಿನಯಕ್ಕಾಗಿ ವಿಹಾನ್‍ ಗೌಡ ಮತ್ತು ಅಂಕಿತಾ ಅಮರ್‍ ಅವರಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಬರುವುದು ನಿಶ್ಚಿತವೆಂದು ಭವಿಷ್ಯ ನುಡಿದ ಅವರು, ‘ಈಗಾಗಲೇ ನಾನು ಮೂರು ಬಾರಿ ಸಿನಿಮಾ ನೋಡಿದ್ದೇನೆ. ಈ ಜಾನರ್‍ನಲ್ಲಿ ಹಲವು ಪ್ರೇಮಕಥೆಗಳನ್ನು ನೋಡಿರುತ್ತೇವೆ. ಅದರಲ್ಲಿ ಚಂದ್ರಜಿತ್‍ ಬರವಣಿಗೆಯಲ್ಲಿ ಒಂದು ವಿಶೇಷತೆ ಇದೆ. ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗೂ ಇದೆ. ಈ ಚಿತ್ರದಲ್ಲಿ ಅಂಕಿತಾ ನಟನೆಯ ಬಗ್ಗೆ ಜನ ನಿಜಕ್ಕೂ ಮಾತನಾಡುತ್ತಾರೆ. ನಾನು ಸಿನಿಮಾ ನೋಡಿ ಅವರಿಗೆ ಫೋನ್‍ ಮಾಡಿ ಹಾರೈಸಿದೆ. ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ವಿಹಾನ್‍ ಕಣ್ಣಲ್ಲೇ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಈ ವರ್ಷ ವಿಹಾನ್‍ ಮತ್ತು ಅಂಕಿತಾ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆಯುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದರು.

ಚಂದ್ರಜಿತ್ ಬೆಳಿಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ವಿಹಾನ್‍, ಅಂಕಿತಾ ಮತ್ತು ಮಯೂರಿ ಜೊತೆಗೆ ‘ಗೀತಾಂಜಲಿ’ ಖ್ಯಾತಿಯ ಗಿರಿಜಾ ಶೆಟ್ಟರ್, ಅನಿರುದ್ಧ್ ಭಟ್, ದಾಮಿನಿ ಧನರಾಜ್ ಮುಂತಾದವರು ನಟಿಸಿದ್ದಾರೆ.

Tags:
error: Content is protected !!